ಬಂಟ್ವಾಳ: ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೇಳುವ ನಾವು ಸ್ವಾತಂತ್ರ್ಯ ಕಳೆದುಕೊಂಡ ಕಾರಣವನ್ನೂ ಯುವ ಜನರಿಗೆ ಹೇಳಬೇಕಾದ ಅಗತ್ಯವಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಎಸ್ಎಸ್ಎಲ್ ಸಿ ಪರೀಕ್ಷಯಲ್ಲಿ ಪೂರ್ಣ ಅಂಕಗಳನ್ನು ಪಡೆದ ಪ್ರತಿಕ್ ಮಲ್ಯ ರನ್ನು ಅಭಿನಂದಿಸಿದ ಅವರು, ಈ ಬಾರಿ ಬಂಟ್ವಾಳ ತಾಲೂಕು ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.
ಇದೇ ಮೊದಲ ಬಾರಿ 24 ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ , ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಎಲ್ಲಾ ಎಸ್ ಡಿಎಂಸಿಗಳು ಕ್ರಿಯಾಶೀಲತೆಯಿಂದ ಅನುಷ್ಠಾನಗೊಳಿಸುವಂತೆ ಅವರು ಸಲಹೆ ನೀಡಿದರು.
ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದ ತಹಶೀಲ್ದಾರ್ ರಶ್ಮೀ ಎಸ್ ಆರ್ ಮಾತನಾಡಿ, ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸುವ ಮೂಲಕ ಕೊರೋನಾ ವಿರುದ್ಧವೂ ಏಕತೆಯ ಹೋರಾಟ ನಡೆಸೋಣ. ನಮ್ಮ ನಡುವಿನ ಭಿನ್ನ ಭಿನ್ನವಾದ ಮನೋಭಾವದಿಂದ ನಾವು ಪರಕೀಯರ ಆಡಳಿತಕ್ಕೆ ತುತ್ತಾಗಿದ್ದೇವು, ಅದಕ್ಕಾಗಿ ಹೋರಾಟ ನಡೆಸಿದ ಎಲ್ಲರನ್ನೂ ಸ್ಮರಿಸುವ ಮೂಲಕ ಸ್ವಾತಂತ್ರ್ಯ ವನ್ನು ಉಳಿಸೋಣ ಎಂದರು.
ವೇದಿಕೆಯಲ್ಲಿ ಡಿವೈಎಸ್ಪಿ ವೆಲೈಂಟೀನ್ ಡಿಸೋಜಾ, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾಲೂಕು ಕೃಷಿನಿರ್ದೇಶಕ ವೇದಿಕೆಯಲ್ಲಿದ್ದರು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಹಾಗೂ ಕಲಾವಿದ ಮಂಜು ವಿಟ್ಲ ವಂದಿಸಿದರು.
ಬಂಟ್ವಾಳ ಪೋಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಗೃಹರಕ್ಷಕದಳ, ತಾಲೂಕು ಕಚೇರಿ ಸಿಬ್ಬಂದಿ ಮತ್ತಿತರರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಮವಸ್ತ್ರ ಧರಿಸಿ ವಿಶೇಷ ಆಕರ್ಷಣೆಯಾಗಿದ್ದರು.