ಮಂಗಳೂರು: ತಂದೆ ತಾನು ಕೇಳಿದ 4 ಲಕ್ಷ ರೂಪಾಯಿಯ ದುಬಾರಿ ಬೈಕ್ ಕೊಡಿಸಲಿಲ್ಲ ಎಂದು ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಬಳಿ ನಡೆದಿದೆ.
ರಾಹುಲ್ ಕಾಲಿನ್ ಫರ್ನಾಂಡೀಸ್ ಮೃತ ಯುವಕ. ರಾಹುಲ್ ಕಳೆದ ಹಲವು ದಿನಗಳಿಂದ ನನಗೆ 4 ಲಕ್ಷ ರೂ.ಮೌಲ್ಯದ ಬೈಕ್ ಕೊಡಿಸುವಂತೆ ತಂದೆಯನ್ನು ಪೀಡಿಸುತ್ತಿದ್ದನಂತೆ. ಇನ್ನೂ ತನ್ನ ಮೊಬೈಲ್ನಲ್ಲಿ ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ ಗಳನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಬುಧವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರಾಹುಲ್ ರೂಂಗೆ ಅವರ ತಾಯಿ ಬಂದಾಗ ಮಗ ಕಾಣಿಸಲಿಲ್ಲ. ಸುತ್ತ ಮುತ್ತ ಹುಡುಕಿದರೂ, ಪುತ್ರ ಕಾಣಿಸದಿದ್ದಾಗ ಪೋಷಕರು ಗಾಬರಿಯಾಗಿದ್ದಾರೆ. ಕೊನೆಗೆ ರಾಹುಲ್ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮುಲ್ಕಿ ಠಾಣಾ ಪೊಲೀಸರು, ರಾಹುಲ್ ತಂದೆ ಬೈಕ್ ಕೊಡಿಸದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.