ಕಾರ್ಕಳ: ನಲ್ಲೂರು ಗ್ರಾಮದ ಬಾಹುಬಲಿ ಸ್ವೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸುರಕ್ಷಿತ (20) ಎಂಬ ಯುವತಿ ಕೆಲಸ ಮುಗಿಸಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಯುವತಿ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಮನೆಬಿಟ್ಟು ಪ್ರೇಮಿಯ ಜತೆ ತೆರಳಿರಬೇಕೆಂದು ಶಂಕಿಸಿ ಕಾರ್ಕಳ ಪೊಲೀಸರಿಗೆ ಆಕೆಯ ಪೋಷಕರು ದೂರಿದ್ದಾರೆ.
ಕಾರ್ಕಳ ತಾಲೂಕು ಮಾಳ ಗ್ರಾಮದ ಮಂಜಲ್ತಾರ್ ನಿವಾಸಿಯಾಗಿರುವ ಸುರಕ್ಷಿತ, ಬೆಳಗ್ಗೆ 08:00 ಗಂಟೆಗೆ ಕೆಲಸಕ್ಕೆಂದು ಹೋದವಳು ಸಂಜೆ 6:30 ಗಂಟೆಯವರೆಗೆ ಮನೆಗೆ ವಾಪಾಸ್ಸು ಬಾರದೇ ಇದ್ದಳು. ನಂತರ ಗಾಬರಿಗೊಂಡ ಆಕೆಯ ಮನೆಯವರು ಫೋನ್ ಮಾಡಿದಾಗ, ನನಗೆ ಮದುವೆ ನಿಶ್ಚಯವಾದ ಹುಡುಗನೊಂದಿಗೆ ವಿವಾಹವಾಗಲು ಇಷ್ಟವಿಲ್ಲದ ಕಾರಣ ಮನೆಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದಾಳೆ.
ನಾಪತ್ತೆಯಾಗಿರುವ ಯುವತಿ ಅಸ್ಸಾಂ ಮೂಲದ ಹುಡುಗ ಭುಮನ ಎಂಬುವನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ಹೋಗಿರುವ ಬಗ್ಗೆ ಸಂಶಯವಿರುತ್ತದೆ ಎಂದು ಪೋಷಕರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
