ಬೆಂಗಳೂರು ತಾನು ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ಅಣ್ಣನ ಮಗಳೆಂದು ಹೇಳಿಕೊಂಡು ವಂಚಿಸುತ್ತಿದ್ದ ಯುವತಿಯನ್ನು ಜ್ಞಾನಭಾರತಿ ಠಾಣೆ ಪೊಲೀಸ್ರು ಬಂಧಿಸಿದ್ದಾರೆ.
ನಗರದ ಜ್ಞಾನಗಂಗಾ ಬಡಾವಣೆ ನಿವಾಸಿ ಪಲ್ಲವಿ ಬಂಧಿತ ಆರೋಪಿ. ವಿದ್ಯಾವಂತ ನಿರುದ್ಯೋಗಿ ಯುವಕರನ್ನ ಟಾರ್ಗೆಟ್ ಮಾಡ್ತಿದ್ದ ಪಲ್ಲವಿ, ಸ್ವಯಂ ಉದ್ಯೋಗ ಸ್ಥಾಪನೆಗೆ ಪ್ರಧಾನಮಂತ್ರಿ ಮುದ್ರಾಯೋಜನೆ ಅಡಿಯಲ್ಲಿ 10 ಲಕ್ಷ ಲೋನ್ ಕೊಡಿಸುವುದಾಗಿ ನಂಬಿಸುತ್ತಿದ್ದಳು. ನಂತರ ಹಣ ಪಡೆದು ಲೋನ್ ಕೊಡಿಸದೇ ವಂಚಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.
ಲಾಕ್ ಡೌನ್ ಟೈಮಲ್ಲಿ ಪಲ್ಲವಿಗೆ ರಾಜಶೇಖರ್ ಎಂಬುವವರ ಪರಿಚಯವಾಗಿತ್ತು. ಈ ವೇಳೆ ತಾನೊಬ್ಬಳು ಸಮಾಜಸೇವಕಿ ಅಂತ ಪಲ್ಲವಿ ಗುರುತಿಸಿಕೊಂಡಿದ್ದಳು. ರಾಜಶೇಖರ್ ಅಳಿಯ ಯೋಗೇಶ್ ಕಾರನ್ನು ಮೈಸೂರು, ಬೆಂಗಳೂರು, ರಾಮನಗರಗಳಲ್ಲಿ ಸುತ್ತಾಡಲು ಬಾಡಿಗೆಗೆ ಪಡಿದಿದ್ದಳು. ಕಾರಿನ ಬಾಡಿಗೆ 4 ಲಕ್ಷ ಆದ್ರೂ ಕೊಡದ ಪಲ್ಲವಿ, ಕಾರು ಚಾಲಕ ಯೋಗೇಶ್ನನ್ನು ಪ್ರೀತಿಸುವ ನಾಟಕವಾಡಿದ್ದಳು ಎನ್ನಲಾಗಿದೆ. ನೀನಂದ್ರೆ ನನಗಿಷ್ಟ, ಮದುವೆ ಮಾಡ್ಕೊ. ನಾನು ಪರಮೇಶ್ವರ್ ಅಣ್ಣನ ಮಗಳು. ನನಗೆ ಬೆಂಗಳೂರು ಮೈಸೂರು ರಾಮನಗರದಲ್ಲಿ ಆಸ್ತಿ ಇದೆ. ನನ್ನನ್ನ ಮದುವೆ ಆಗು, ಇಲ್ಲವಾದ್ರೆ ನನ್ನನ್ನ ರೇಪ್ ಮಾಡಿದ್ದೀಯ ಅಂತ ಕಂಪ್ಲೇಂಟ್ ಮಾಡ್ತಿನಿ ಅಂತ ಟಾರ್ಚರ್ ಮಾಡಲು ಶುರುಮಾಡಿದ್ದಳು ಎಂದು ಹೇಳಲಾಗಿದೆ. ಈ ವಿಚಾರವನ್ನ ಕಾರು ಚಾಲಕ ಯೋಗೇಶ್ ತನ್ನ ಮಾಲೀಕ ಜನಾರ್ದನ್ಗೆ ತಿಳಿಸಿದ್ದರು.
ಪರಮೇಶ್ವರ್ ಹೆಸರಲ್ಲಿ ವಂಚನೆ ಮಾಡುವುದಲ್ಲದೇ ಕಾರಿನ ಬಾಡಿಗೆ ಕೇಳಿದ್ದಕ್ಕೆ ಪಲ್ಲವಿ ಹಣ ನೀಡದೆ ಧಮ್ಕಿ ಹಾಕಿದ್ದಳು. ಬಳಿಕ ಕಾರುಚಾಲಕ ಯೋಗೇಶ್ ಹಾಗೂ ಜರ್ನಾದನ್, ಪಲ್ಲವಿಯನ್ನ ಸದಾಶಿವನಗರದ ಪರಮೇಶ್ವರ್ ನಿವಾಸಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಪರಮೇಶ್ವರ್ ಪತ್ನಿ ಮನೆಯಲ್ಲಿದ್ದು, ಪಲ್ಲವಿ ನಮ್ಮ ಸಂಬಂಧಿಯಲ್ಲ. ನಮ್ಮ ಯಜಮಾನರು ತುಮಕೂರಿನಲ್ಲಿದ್ದಾರೆ ಅಂದಿದ್ದಾರೆ. ನಂತರ ನೇರವಾಗಿ ಪಲ್ಲವಿಯನ್ನ ತುಮಕೂರಿಗೆ ಕರೆದೊಯ್ದು ಪರಮೇಶ್ವರ್ ಸಮ್ಮುಖದಲ್ಲಿ ವಿಚಾರಿಸಿದಾಗ, ಕೂಡಲೇ ಪೊಲೀಸರಿಗೆ ದೂರು ನೀಡಿ. ಈಕೆ ಯಾರು ಅನ್ನೋದೇ ನನಗೆ ಗೊತ್ತಿಲ್ಲ ಅಂತ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಿಂದ ಬೆಂಗಳೂರಿಗೆ ಕರೆತರೋ ವೇಳೆ ಪಲ್ಲವಿ ಕಿಡ್ನಾಪ್ ನಾಟಕ ಕೂಡ ಆಡಿದ್ದಾಳೆ. ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಲು ಹೇಳಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾಳೆ. ನನ್ನನ್ನು ಯೋಗೇಶ್ ಈಟಿಯೋಸ್ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾನೆ ಅಂತ ದೂರಿದ್ದಾಳೆ. ಯೋಗೇಶ್ ಮೊಬೈಲ್ಗೆ ಕರೆ ಮಾಡಿದ ಪೊಲೀಸರು ಕೆಂಗೇರಿ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಕಡೆಗೆ ಪೊಲೀಸರ ವಿಚಾರಣೆ ವೇಳೆ ತಾನು ಮಾಡಿರುವ ತಪ್ಪನ್ನು ಪಲ್ಲವಿ ಒಪ್ಪಿಕೊಂಡಿದ್ದಾಳೆ. ಸದ್ಯ ಪ್ರಕರಣ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಂಚಕಿ ಪಲ್ಲವಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ