ಮಂಗಳೂರು: ಐಸಿಸ್ ಉಗ್ರವಾದಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ ಎಂದು ಎನ್ಐಎ ಅಧಿಕಾರಿಗಳು ಬಂಧಿಸಿರುವ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಬಗೆಗಿನ ಆಘಾತಕಾರಿ ವರದಿಗಳು ಹೊರಬೀಳುತ್ತಿದ್ದಂತೆ ಸಾರ್ವಜನಿಕರಲ್ಲಿ ಅನುಮಾನ, ತೀವ್ರ ಆತಂಕವನ್ನು ಹುಟ್ಟುಹಾಕಿಸಿದೆ. ಒಬ್ಬಮತಾಂತರಗೊಂಡ ಹೆಣ್ಣು ಹೀಗೂ ಇರಬಹುದೇ ಅನ್ನುವ ಶಂಕೆಯ ಜೊತೆಗೆ, ಇಸ್ಲಾಮಿಗೆ ಪರಿವರ್ತನೆಗೊಂಡ ಮಾತ್ರಕ್ಕೆ ಈ ರೀತಿಯಲ್ಲೂ ವೈರುಧ್ಯದಿಂದ ವರ್ತಿಸಲು ಸಾಧ್ಯವೇ ಅನ್ನುವ ಅಚ್ಚರಿಯಿಂದ ಜನಸಾಮಾನ್ಯರು ಚರ್ಚೆಯಲ್ಲಿ ತೊಡಗಿದ್ದಾರೆ.
ಯಾಕಂದ್ರೆ, ದೀಪ್ತಿ ಮಾರ್ಲ ಉಳ್ಳಾಲದಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡು ಮರಿಯಂ ಆದಬಳಿಕ ಒಬ್ಬ ಮುಸ್ಲಿಂ ಮಹಿಳೆ ಮಾತ್ರ ಅನ್ನುವಷ್ಟಕ್ಕೆ ಉಳಿದಿಲ್ಲ. ದಂತ ವೈದ್ಯಕೀಯ ಓದಿದ್ದ ದೀಪ್ತಿ ತನ್ನ ಇಂಗ್ಲಿಷ್ ಪಾಂಡಿತ್ಯದಿಂದ ಇಡೀ ಜನಮಾನಸವೇ ಅಚ್ಚರಿ ಪಡುವಷ್ಟು ಬೆಳೆದಿದ್ದಾಳೆ, ಐಸಿಸ್ ಉಗ್ರರ ಆನ್ಸನ್ ಇಂಗ್ಲಿಷ್ ಮ್ಯಾಗಜಿನ್ ಪರವಾಗಿ ಕೆಲಸ ಆರಂಭಿಸಿ, ಈಗ ಇಡೀ ದೇಶವೇ ಗಮನ ಸೆಳೆಯುವಷ್ಟು ಕುಖ್ಯಾತಿ ಪಡೆದಿದ್ದಾಳೆ. ಆದರೆ, ದೇಶದ್ರೋಹಿ ಚಟುವಟಿಕೆಯಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದಾಳೆ ಅನ್ನುವುದು ಆತಂಕ ತರುವ ವಿಚಾರ, ಅಷ್ಟೇ ಅಲ್ಲ, ಹಿಂದು ಸಂಘಟನೆಗಳು ಆತಂಕದಿಂದ ಹೇಳುವ ಲವ್ ಜಿಹಾದಿ ಅನ್ನುವುದರ ಸ್ಥೂಲ ರೂಪವನ್ನು ಹಿಂದುಗಳತ್ತ ಉಲ್ಟಾ ಮಾಡಿ ಬಾಣ ಹೂಡಿದ್ದಾಳೆ.
ಆಕೆಗೂ ನಮ್ಮ ಕುಟುಂಬಕಕ್ಕೂ ಸಂಬಂಧ ಇಲ್ಲ!
ಈ ನಡುವೆ, ದೀಪ್ತಿ ಮಾರ್ಲ ಅವರ ಜೈವಿಕ ಹೆತ್ತವರಾದ ಕೊಡಗಿನ ಕುಶಾಲನಗರದಲ್ಲಿ ನೆಲೆಸಿರುವ ಬಂಟ ಕುಟುಂಬ ಆಕೆಗೂ ತಮಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಎನ್ಐಎ ಅಧಿಕಾರಿಗಳು ಬಂಧಿಸಿದ ಬಳಿಕ ನಮ್ಮ ಎಲ್ಲ ರೀತಿಯ ಸಂಬಂಧಗಳೂ ಕಡಿದುಕೊಂಡಿವೆ. ಆಕೆ ಯಾವ ಕೃತ್ಯ ಎಸಗಿದ್ದಾಳೋ, ಅದಕ್ಕೆ ಆಕೆಯೇ ಹೊಣೆ. ಆಕೆಯ ಮದುವೆ, ಈ ಹಿಂದಿನ ಚಟುವಟಿಕೆಗಳು, ಭವಿಷ್ಯ ಎಲ್ಲದಕ್ಕೂ ಆಕೆಯೇ ಜವಾಬ್ದಾರಿ. ಏನೆಲ್ಲಾ ಮಾಡಿದ್ದಾಳೋ ಎಲ್ಲವೂ ಆಕೆಯೊಬ್ಬಳದ್ದೇ ಆಯ್ಕೆ ಆಕೆಯ ಕೃತ್ಯಕ್ಕಾಗಿ ಕೇಳಿಬರುತ್ತಿರುವ ನಿಂದನೆಗಳಿಗೆ ನಾವು ಹೊಣೆಯಲ್ಲ. ಆಕೆ ಅಥವಾ ಆಕೆಯ ಗಂಡ, ಮಕ್ಕಳಿಗೆ ನಮ್ಮ ಆಸ್ತಿಯಲ್ಲಿ ಯಾವುದೇ ಪಾಲು ಇರುವುದಿಲ್ಲ ಎಂದು ಕೊಡಗಿನ ಕುಶಾಲನಗರದಲ್ಲಿ ನೆಲೆಸಿರುವ ದೀಪ್ತಿ ಮಾರ್ಲ ಹೆತ್ತವರಾದ ಮುಂಡಾಡಿಗುತ್ತು ಸದಾನಂದ ಮಾರ್ಲ, ಬಿ.ಕೆ.ಧನಲಕ್ಷ್ಮಿ ಮಾರ್ಲ, ಮುಂಡಾಡಿಗುತ್ತು ದರ್ಶನ್ ಮಾರ್ಲ ಸಂಬಂಧಿತರ ಗಮನಕ್ಕೆಂದು ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ.