ಕುಂದಾಪುರ: ಭಾರೀ ಗಾಳಿಮಳೆಗೆ ತಾಲೂಕಿನ ಹಲವು ಮನೆಗಳಿಗೆ ಹಾನಿಯುಂಟಾಗಿದೆ. ಕುಂದಾಪುರ ತಾಲೂಕು ವ್ಯಾಪ್ತಿಯ ಕೊರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೇಮಾ ಮೊಗವೀರ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಗಾಳಿಗೆ ಮನೆಯ ಮುಂಭಾಗದ ತೆಂಗಿನ ಮರ ಬಿದ್ದು ಮೇಲ್ಛಾವಣಿಗೆ ಹಾನಿಯುಂಟಾಗಿದೆ. ಮರ ಬಿದ್ದ ರಭಸಕ್ಕೆ ಮನೆಯ ಫರ್ನಿಚರ್, ಟಿವಿ ಸೇರಿ ಒಟ್ಟು 1 ಲಕ್ಷ ರೂಪಾಯಿ ಸೊತ್ತಿಗೆ ಹಾನಿಯುಂಟಾಗಿದೆ. ಮರ ಬಿದ್ದ ಸಂದರ್ಭ ಮನೆಯ ಹೆಂಚು ತಲೆ ಮೇಲೆ ಬಿದ್ದು ಸುಜನ್ ಎಂಬುವರಿಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಪಕ್ಕದ ಮಿಣ್ಕ ಮೊಗವೀರ, ಮಹಾಬಲ ಕುಲಾಲ ಅವರ ಮನೆಗೂ ಹಾನಿಯುಂಟಾಗಿದೆ. ಗಾಳಿಗೆ ಸಂಜೀವ ಮಡಿವಾಳ ಎಂಬುವರ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.ಇಷ್ಟಲ್ಲದೆ ಭೋವಿಕಟ್ಟೆ ಬಳಿ ಮರ ಮುರಿದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿದು ಹೋಗಿದೆ.ಹೆಸ್ಕತ್ತೂರು ಸರ್ಕಾರಿ ಫ್ರೌಢಶಾಲೆಯ ಮೇಲ್ಛಾವಣಿ ಹಾರಿ ಹೋಗಿ ನಷ್ಟ ಸಂಭವಿಸಿದೆ.ಸ್ಥಳಕ್ಕೆ ಕೊರ್ಗಿ ಪಿಡಿಓ ಸುಧಾಕರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರ ಭೇಟಿ ಪರಿಶೀಲನೆ ನಡೆಸಿದರು.