ಉಡುಪಿ: ತುಳು ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ,
ಭಾಷೆ ಮತ್ತು ಸಂಸ್ಕೃತಿ ಒಟ್ಟಾಗಿ ಸಾಗಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿ ಇಂದು ಖಾತೆ ಹಂಚಿಕೆಯಾದ ಬಳಿಕ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ಎರಡನ್ನು ಸಮತೋಲನ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ತುಳುಭಾಷೆಗೆ ರಾಜ್ಯಭಾಷೆ ಸ್ಥಾನಮಾನ ವಿಚಾರ ಬಹಳ ವರ್ಷಗಳ ಹಿಂದಿನ ಬೇಡಿಕೆಯಾಗಿದ್ದು, ತೊಡಕು ನಿವಾರಿಸಿ ಒತ್ತಡ ತಂದು ಸ್ಥಾನಮಾನ ಕೊಡುವ ಕೆಲಸ ಮಾಡುತ್ತೇನೆ ಎಂದೂ ಸಚಿವ ಸುನೀಲ್ ತಿಳಿಸಿದ್ದಾರೆ.
ಇನ್ನು ಇಂಧನ ಖಾತೆ ಬಗ್ಗೆ ಪ್ರತಿಕ್ರಿಯಿಸಿರುವ ಸುನೀಲ್ ಕುಮಾರ್, ಬಹಳ ದೊಡ್ಡ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿದ್ದಾರೆ, ಪಕ್ಷ ನನಗೆ ಸಚಿವನಾಗಿ ಜವಾಬ್ದಾರಿ ನೀಡಿತ್ತು, ಈಗ ಮುಖ್ಯಮಂತ್ರಿಗಳು ಅದಕ್ಕಿಂತ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ, ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ ನಿರ್ವಹಿಸಿದಂತಹ ಇಂಧನ ಖಾತೆ ಸಿಕ್ಕಿದೆ, ಈ ಜವಾಬ್ದಾರಿಯನ್ನು ಸಮರ್ಪಕವಾಗಿ ಹೊಸತನದೊಂದಿಗೆ ನಿರ್ವಹಿಸುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ಉಡುಪಿಯಲ್ಲಿ ಹೇಳಿದ್ದಾರೆ.