ವಿಟ್ಲದಲ್ಲಿ ಮಲಗಿದಲ್ಲೇ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೃತ ಅರವಿಂದ ಭಾಸ್ಕರ್ ಅವರ ಪತ್ನಿಯೇ ಪ್ರಿಯಕರನೊಂದಿಗೆ ಸೇರಿಕೊಂಡು ಕೊನೆ ಮಾಡಿರುವ ವಿಚಾರ ಬಯಲಾಗಿದೆ. ಅರವಿಂದ ಭಾಸ್ಕರ್ ಅವರ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಸೇರಿಕೊಂಡು ಕೊಲೆ ಮಾಡಿರೋದು ವಿಚಾರಣೆ ವೇಳೆ ಗೊತ್ತಾಗಿದೆ.
ಅರವಿಂದ ಭಾಸ್ಕರ್ ಅವರು ಸುಮಾರು 2 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದರು. ಅದರ ಸೆಂಟ್ರಿಂಗ್ ಕೆಲಸವನ್ನು ಯೋಗೀಶ ಗೌಡ ಎಂಬಾತ ನಿರ್ವಹಿಸುತ್ತಿದ್ದ. ಆತ ಅರವಿಂದ ಭಾಸ್ಕರನ ಪತ್ನಿ ಆಶಾಳಿಗೆ ಹತ್ತಿರವಾಗಿದ್ದ. ಇನ್ನು ಅರವಿಂದ ಭಾಸ್ಕರ್ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಪತ್ನಿ ಆಶಾಗೆ ಅಸಮಾಧಾನವಿತ್ತು. ಇದೇ ವಿಚಾರಕ್ಕೆ ಯೋಗೀಶ ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರ ಅವರಿಗೆ ಹಲ್ಲೆ ನಡೆಸುತ್ತಿದ್ದರು. ಇದರಿಂದ ಹೆದರಿ ರಾತ್ರಿ ವೇಳೆಯಲ್ಲಿ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿರುವ ಬಗ್ಗೆ ಸುಮಾರು 1 ತಿಂಗಳ ಹಿಂದೆ ಆತ್ಮೀಯರೊಬ್ಬರಿಗೆ ಅರವಿಂದ್ ತಿಳಿಸಿದ್ದರು.
ಇನ್ನು ಅರವಿಂದ್ ಭಾಸ್ಕರ್ ಸಾವನ್ನಪ್ಪಿದ ಸುದ್ದಿ ತಿಳಿದು ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥ ಪೊಲೀಸರಿಗೆ ದೂರು ನೀಡಿ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಫೆ. 26ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ತಂದೆಯವರಿಗೆ ಕರೆ ಮಾಡಿದ ಆಶಾ, ಪತಿ ನಿನ್ನೆ ರಾತ್ರಿ 10 ಗಂಟೆಗೆ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 7.30 ಸುಮಾರಿಗೆ ನೋಡುವಾಗ ಪತಿ ಏಳುತ್ತಿಲ್ಲ, ಮನೆಗೆ ಬನ್ನಿ ಎಂದು ತಿಳಿಸಿದ್ದಾಳೆ. ಬಳಿಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದ ವಿಚಾರ ತಿಳಿದು ಅಲ್ಲಿಗೆ ಹೋದಾಗ ವೈದ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತದೇಹದ ಸ್ಥಿತಿಗತಿಯನ್ನು ಪರಿಶೀಲಿಸಿದಾಗ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಅದರಂತೆ ವಿಚಾರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.