ಬೆಂಗಳೂರು: 40 ಲಕ್ಷ ರೂಪಾಯಿ ಹಣಕ್ಕಾಗಿ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕಿಡ್ನ್ಯಾಪ್ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ನಗರದ ತ್ಯಾಗರಾಜನಗರ ನಿವಾಸಿ ಸೋಮಶೇಖರ್ ಎಂಬಾತನನ್ನು ಪತ್ನಿ ಸುಪ್ರಿಯಾ ಅಪಹರಿಸಿದ್ದಾಳೆ. ತನ್ನ ಪತಿ ಕೊರೊನಾ ಸೋಂಕಿತನೆಂದು ನಕಲಿ ದಾಖಲೆಯನ್ನು ಸೃಷ್ಟಿ ಮಾಡಿ ಕಿಡ್ನ್ಯಾಪ್ ಮಾಡಿದ್ದಾಳೆ.
ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಸೋಮಶೇಖರ್ ಬೆಂಗಳೂರಿನಲ್ಲಿ ಮನೆ ಖರೀದಿಸಲು 40 ಲಕ್ಷ ರೂ. ಹಣ ಕೂಡಿಟ್ಟಿದ್ದರು. ಈ ಹಣವನ್ನು ಲಪಟಾಯಿಸಲು ಸ್ನೇಹಿತರ ಜತೆ ಸೇರಿ ಸುಪ್ರಿಯಾ ಖತರ್ನಾಕ್ ಪ್ಲಾನ್ ಮಾಡಿದ್ದಳು. ತನಗೆ ವಿಪರೀತ ಹೊಟ್ಟೆ ನೋವೆಂದು ಹೇಳಿ, ಮಾತ್ರೆ ತರುವಂತೆ ಪತಿಯನ್ನು ಮನೆಯಿಂದ ಹೊರ ಕಳುಹಿಸಿದ್ದಳು. ಈ ವೇಳೆ ಕೊರೊನಾ ಸೋಂಕಿತ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆಂದು ಸುಳ್ಳು ಹೇಳಿ ಹೊರಗಡೆ ಬಂದಿದ್ದ ಸೋಮಶೇಖರನನ್ನು ಸುಪ್ರಿಯಾ ಸ್ನೇಹಿತರು ಆಂಬ್ಯುಲೆನ್ಸ್ನಲ್ಲಿ ಕಿಡ್ನಾಪ್ ಮಾಡಿದ್ದರು.
ಸೋಮಶೇಖರ್ಗೆ ಕರೊನಾ ಪಾಸಿಟಿವ್ ಇದೆ ಎಂದು ಸಾಬೀತು ಪಡಿಸಲು ನಕಲಿ ವೈದ್ಯಕೀಯ ದಾಖಲೆ ಪಡೆದಿದ್ದರು. ಕುಮಾರಸ್ವಾಮಿ ಲೇಔಟ್ ನಿವಾಸಿ ಕಿರಣ್ ಕುಮಾರ್ ಎಂಬಾತನಿಂದ ಸುಪ್ರೀಯ ಅಂಡ್ ಟೀಂ ನಕಲಿ ವೈದ್ಯಕೀಯ ದಾಖಲೆ ಪಡೆದಿತ್ತು. ಬಳಿಕ ತನ್ನ ಸ್ನೇಹಿತರ ಜತೆ ಸೇರಿ ಸುಪ್ರಿಯಾ ಆಂಬ್ಯುಲೆನ್ಸ್ನಲ್ಲಿ ಚಾಮರಾಜನಗರಕ್ಕೆ ಕಿಡ್ನಾಪ್ ಮಾಡಿಸಿದ್ದಳು.
ಚಾಮರಾಜನಗರದ ತೋಟದ ಮನೆಯೊಂದರಲ್ಲಿ ಕೂಡಿ ಹಾಕಿ 40 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರ ನಡುವೆ ಸ್ನೇಹಿತರಿಗೆ ಕರೆ ಮಾಡಿದ್ದಕ್ಕೆ ಸೋಮಶೇಖರ್ ಜೀವ ಉಳಿದಿದೆ. ಸ್ನೇಹಿತರ ನೆರವು ಪಡೆದು ಸೋಮಶೇಖರ್ ಬಚಾವ್ ಆಗಿದ್ದಾರೆ. ತನ್ನ ಸ್ನೇಹಿತರಿಗೆ ಕರೆ ಮಾಡಿ 10 ಲಕ್ಷ ರೂ. ಹಣವನ್ನ ತನ್ನ ಪತ್ನಿ ಸುಪ್ರಿಯಾಗೆ ನೀಡುವಂತೆ ಸೋಮಶೇಖರ್ ತಿಳಿಸಿದ್ದ. ಸಂಶಯಗೊಂಡ ಸೋಮಶೇಖರ್ ಸ್ನೇಹಿತರು ಸುಪ್ರಿಯಾಳಿಗೆ ಕರೆ ಮಾಡಿದಾಗ ಖತರ್ನಾಕ್ ವಂಚಕಿ ಸಿಕ್ಕಿಬಿದ್ದಿದ್ದಾಳೆ.
ಕರೆ ಮಾಡಿದಾಗ ಮಾಗಡಿ ರಸ್ತೆಯ ಆಸ್ಪತ್ರೆಯಲ್ಲಿ ತನ್ನ ಪತಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸುಪ್ರಿಯಾ ಸುಳ್ಳು ಹೇಳಿದ್ದಳು. ಇದರಿಂದ ಸಂಶಯಗೊಂಡ ಸೋಮಶೇಖರ್ ಸ್ನೇಹಿತರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಸೋಮಶೇಖರ್ ಮನೆ ಬಳಿ ತೆರಳಿ ಸುಪ್ರಿಯಾ ವಿಚಾರಣೆ ಮಾಡಿದ್ದರು. ಈ ವೇಳೆ ತನಗೇನು ಗೊತ್ತಿಲ್ಲದಂತೆ ಪೊಲೀಸರ ಮುಂದೆ ಡ್ರಾಮಾ ಮಾಡಿದ್ದಳು.
ಇದಾದ ಬಳಿಕ ತನ್ನ ಸ್ನೇಹಿತ ಗಗನ್ಗೆ ಕಾಲ್ ಮಾಡಿ ಕಿಡ್ನಾಪ್ ಮಾಡಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ ಎಂದಿದ್ದಳು. ಇದರಿಂದ ಭಯಗೊಂಡ ಗಗನ್, ಸೋಮಶೇಖರ್ನಿಂದ ತನ್ನ ಸ್ನೇಹಿತರಿಗೆ ಕಾಲ್ ಮಾಡಿಸಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನ. 3 ರಂದು ಮನೆಗೆ ಬರೋದಾಗಿ ಸುಳ್ಳು ಹೇಳಿಸಿದ್ದ. ಈ ವೇಳೆ ಗಗನ್, ಗಗನ್ ತಾಯಿ ಲತಾ ಸೋಮಶೇಖರ್ನನ್ನ ಮನೆಗೆ ಕರೆತಂದು ಬಿಟ್ಟು ಹೋಗಿದ್ದರು. ಇದೇ ವೇಳೆ ಗಗನ್ ಹಾಗೂ ಗಗನ್ ತಾಯಿಯನ್ನು ಹಿಡಿದು ಸೋಮಶೇಖರ್ ಸ್ನೇಹಿತರು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಕಿಡ್ನಾಪ್ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಸುಪ್ರಿಯಾ ಸೇರಿದಂತೆ ಒಟ್ಟು 6 ಜನರನ್ನು ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ. ಸುಪ್ರಿಯಾ ಸ್ನೇಹಿತ ಗಗನ್, ಗಗನ್ ತಾಯಿ ಲತಾ, ಬಾಲಾಜಿ, ತೇಜಸ್, ಕಿರಣ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳಾದ ಪ್ರಶಾಂತ್, ಸುಪ್ರೀತ್, ಪವಾರ್ ಮತ್ತು ಅರವಿಂದ್ ರಾಮಪ್ಪ ನಾಪತ್ತೆಯಾಗಿದ್ದು ಬಲೆ ಬೀಸಲಾಗಿದೆ