Friday, June 5, 2026
Homeಕರಾವಳಿಉಡುಪಿಉಡುಪಿ: ಜಿಲ್ಲೆಯಲ್ಲಿ ಮಳೆ ಗಾಳಿಯಿಂದ ವ್ಯಾಪಕ ಹಾನಿ: 1,840 ಮೀಟರ್ ಕಡಲ್ಕೊರೆತ: ತಾತ್ಕಾಲಿಕ, ಶಾಶ್ವತ ಪರಿಹಾರಕ್ಕೆ...

ಉಡುಪಿ: ಜಿಲ್ಲೆಯಲ್ಲಿ ಮಳೆ ಗಾಳಿಯಿಂದ ವ್ಯಾಪಕ ಹಾನಿ: 1,840 ಮೀಟರ್ ಕಡಲ್ಕೊರೆತ: ತಾತ್ಕಾಲಿಕ, ಶಾಶ್ವತ ಪರಿಹಾರಕ್ಕೆ ಪ್ರಸ್ತಾವನೆ

- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ಮಳೆ -ಗಾಳಿಯಿಂದ ವ್ಯಾಪಕ ಹಾನಿ ಸಂಭವಿಸಿದ್ದು, ಕಡಲ್ಕೊರೆತವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಮುದ್ರ ಪ್ರಕ್ಷುಬ್ಧಗೊಂಡು ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಜೂನ್, ಜುಲೈ ತಿಂಗಳ ಮಳೆಗೆ ಜಿಲ್ಲೆಯಲ್ಲಿ 1,840 ಮೀಟರ್ ಉದ್ದದಷ್ಟು ಕಡಲ್ಕೊರೆತ ಸಂಭವಿಸಿದೆ.

ಜಿಲ್ಲೆಯಲ್ಲಿ ಕಡಲ್ಕೊರೆತದಿಂದ ಆಗಿರುವ ಹಾನಿಗೆ ತುರ್ತು ಕಾಮಗಾರಿ ಮೂಲಕ ಸರಿಪಡಿಸಲು ಸರಕಾರಕ್ಕೆ 13.82 ಕೋ. ರೂ., ಅಂದಾಜು ಪ್ರಸ್ತಾವನೆ ಸಲ್ಲಿಸಲಾಗಿದೆ. ಮರವಂತೆ ನಾಗಬನದ ಬಳಿ ಕಡಲ ತೀರದಲ್ಲಿ 2.63 ಕೋ. ರೂ., ಗುಜ್ಜಾಡಿ ಹೊಸಾಡು ಕಂಚುಗೋಡು ಬಳಿ 1.88 ಕೋ. ರೂ., ಮುಳೂರು 1.50 ಕೋ. ರೂ., ನಡಿಪ್ಟಟ್ಟ 2.03 ಕೋ, ರೂ., ಕೈಪುಂಜಾಲು 1.80 ಕೋ. ರೂ., ಕೋಟ ಪಡುಕರೆ 98 ಲಕ್ಷ ರೂ., ಕುತ್ಪಾಡಿ ಪಡುಕರೆಯಲ್ಲಿ 1.50 ಕೋ.ರೂ. ಅಗತ್ಯವಿದೆ ಎಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಹಾಗೆಯೇ ಇದೇ ಸ್ಥಳದಲ್ಲಿ ದೀರ್ಘಕಾಲದ ಕಾಮಗಾರಿಗೆ ಸುಮಾರು 20 ಕೋ.ರೂ. ಅವಶ್ಯವಿದೆ ಎಂದು ಉಲ್ಲೇಖಿಸಿದೆ. ಮರವಂತೆಯ ನಾಗಬನ ಬಳಿ ಪ್ರತಿಬಂಧಕ ಗೋಡೆ ನಿರ್ಮಿಸಲು 3.85 ಕೋ.ರೂ., ಕಂಚುಗೋಡಿಗೆ 2.75 ಕೋ.ರೂ., ಆದ್ರಗೋಳಿಗೆ 2.20 ಕೋ.ರೂ., ಮೂಳೂರಿಗೆ 2.20 ಕೋ.ರೂ., ನಡಿಪಟ್ಟಕ್ಕೆ 2.97 ಕೋ.ರೂ., ಕೈಪುಂಜಾಲುಗೆ 2.64 ಕೋ.ರೂ., ಕೋಟ ಪಡುಕರೆಗೆ 1.43 ಕೋ.ರೂ. ಹಾಗೂ ಕುತ್ಪಾಡಿ ಪಡುಕರೆಗೆ 2.20 ಕೋ.ರೂ. ಶಾಶ್ವತ ಪರಿಹಾರಕ್ಕೆ ಅಗತ್ಯವಿದೆ.

ಪ್ರತೀ ವರ್ಷ ಮಳೆಗಾಲದಲ್ಲಿ ಕಡಲ್ಕೊರೆತಕ್ಕೆ ತಡೆ ಒಡ್ಡಲು ಕಲ್ಲು ಹಾಕಲಾಗುತ್ತದೆ. ಇದರ ಬದಲಾಗಿ ಮಳೆಗಾಲಕ್ಕೂ ಮೊದಲೇ ಕಡಲ್ಕೊರೆತ ಆಗಬಲ್ಲ ಪ್ರದೇಶಗಳನ್ನು ಗುರುತಿಸಿ, ಅಲ್ಲಿಗೆ ವೈಜ್ಞಾನಿಕ ವಿಧಾನದ ಮೂಲಕ ಕಲ್ಲು ಹಾಕುವ ಪ್ರಕ್ರಿಯೆ ಶುರುವಾಗಬೇಕು. ಜನಪ್ರತಿನಿಧಿಗಳ ಒತ್ತಡಕ್ಕೆ ತಾತ್ಕಾಲಿಕವಾಗಿ ಕಲ್ಲು ಹಾಕುವುದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನ ಇರುವುದಿಲ್ಲ. ಹೀಗಾಗಿ ಕಡಲ ತೀರದಲ್ಲಿ ವಾಸವಾಗಿರುವ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸ ಬೇಕಾದರೆ ವೈಜ್ಞಾನಿಕ ಕ್ರಮಗಳ ಮೂಲಕ ಕಾಮಗಾರಿ ನಡೆಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

- Advertisement -

Latest News

error: Content is protected !!