ಬಂಟ್ವಾಳ: ಪರಂಗಿಪೇಟೆ ಪುದು ಗ್ರಾಮದ ಕುಂಪನಮಜಲು ಎಂಬಲ್ಲಿ ವ್ಯಕ್ತಿಯೋರ್ವ ಬಾಡಿಗೆ ಕೇಳಲು ಹೋದ ವೇಳೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸಲೀಂ ಅಲ್ತಾಫ್ ಅವರ ಒಡೆತನದ ಕುಂಪನಮಜಲು ಎಂಬಲ್ಲಿರುವ ಡೈಮಂಡ್ ಹೋಂ ಎಂಬ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ಶಬೀರ್ ಎಂಬಾತನು ಕಳೆದ ಒಂದು ವರ್ಷದಿಂದ ಬಾಡಿಗೆ ಕೊಡಲು ಬಾಕಿ ಇದ್ದು ಹಾಗೂ ಆತನ ಬಾಡಿಗೆ ಕರಾರು ಮುಗಿದ ಕಾರಣ ಆತನಿಗೆ ವಿಚಾರ ತಿಳಿಸುವ ಸಲುವಾಗಿ ಫೆ.2 ರಂದು ಮಧ್ಯಾಹ್ನ ಅಪಾರ್ಟ್ ಮೆಂಟ್ ಗೆ ತೆರಳಿರುತ್ತಾರೆ.
ಆ ವೇಳೆ ಗೇಟಿನ ಬಳಿ ಸಲೀಂ ಅಲ್ತಾಫ್ ಅವರನ್ನು ನಿಸಾರ್ ನ ಅಣ್ಣ ಶಬೀರ್ ಎಂಬಾತನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದು, ಬಳಿಕ ಅವ್ಯಾಚವಾಗಿ ನಿಂದಿಸಿ ಮುಂದಕ್ಕೆ ಬಾಡಿಗೆ ಕೇಳಲು ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ, ಕತ್ತಿ ತೆಗೆಯಲು ಹೋದಾಗ ಸಲೀಂ ಅಲ್ತಾಫ್ ರವರು ತಪ್ಪಿಸಿಕೊಂಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 14/2024 ಕಲಂ : 341, 323, 324, 504, 506 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.


