ಮಂಗಳೂರು: ಕಳೆದ 10 ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹತ್ಯೆಗಳಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಾವಳಿಯ ಕಾಂಗ್ರೆಸ್ ನಾಯಕ ಶಾಸಕ ಯು ಟಿ ಖಾದರ್, ಕಳೆದ 10 ದಿನಗಳಲ್ಲಿ ಆದ ಮೂರೂ ಕೊಲೆಯನ್ನು ನಾವು ಖಂಡಿಸುತ್ತೇವೆ. ಇದಕ್ಕೆ ನೈಜ ಕಾರಣವನ್ನು ಮತ್ತು ಕಾರಣರಾದವರನ್ನು ಸರ್ಕಾರ ಪತ್ತೆಹಚ್ಚಿ ಜನರ ಮುಂದೆ ನಿಲ್ಲಿಸಿ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಬಹುದು ಎಂದು ಹೇಳಿದ್ದಾರೆ.
ನೈಜವಾದ ಆರೋಪಿಗಳನ್ನು ಬಂಧಿಸದೆ ಒತ್ತಡಕ್ಕೆ ಪೊಲೀಸರು ಅಮಾಯಕರನ್ನು ಕರೆದುಕೊಂಡು ಬಂದರೆ ಸರ್ಕಾರದ, ಪೊಲೀಸ್ ಇಲಾಖೆಯ ವೈಫಲ್ಯವಾಗುತ್ತದೆ. ರಾಜ್ಯಸರ್ಕಾರ ಪಕ್ಷಾತೀತ, ನ್ಯಾಯತೀತವಾಗಿ ನಡೆದುಕೊಂಡು ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಮಾಡುವ ಕೆಲಸವಾಗಬೇಕಿದೆ ಎಂದರು. ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಗಳನ್ನು ಯಾವ ನಾಯಕರೂ ನೀಡಬಾರದು ಎಂದರು.
ಮಂಗಳೂರಿನಲ್ಲಿ ಶಾಂತಿ ನಲೆಸುವ ಕೆಲಸ ಮಾಡಬೇಕಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬಂದಾಗಲೇ ಕೊಲೆಯಾಗಿದೆ. ಸರ್ಕಾರದ ಮೇಲೆ ನಮಗೆ ನ್ಯಾಯ ಸಿಗುವ ನಂಬಿಕೆ ಇಲ್ಲದಾಗಿದೆ, ಇಲ್ಲಿ ಏನಾಗುತ್ತಿದೆ, ಶಾಂತಿ ಕದಡುವ ಕೆಲಸ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.