ಬಂಟ್ವಾಳ: ಸಾವಿರಾರು ಜನ ಕುಡಿಯಲು ಉಪಯೋಗಿಸುವ ನೇತ್ರಾವತಿ ನದಿ ನೀರಿಗೆ ಈಗ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾದ ತ್ಯಾಜ್ಯ ಸೇರುತ್ತಿದ್ದು, ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂಬ ಆತಂಕ ಮಂಗಳೂರು ಜನರಲ್ಲಿ ಮನೆಮಾಡಿದೆ.
ಬಿಸಿರೋಡ್ ಹೊಸ ಸೇತುವೆಯ ಕೆಳಭಾಗದ ಕಂಚಿ ಕಾರ್ ರಸ್ತೆಯ ನೇತ್ರಾವತಿ ನದಿ ಬದಿಯಲ್ಲಿ
ಪುರಸಭಾ ವಾಹನದ ಮೂಲಕ ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹ ಮಾಡಿದ ತ್ಯಾಜ್ಯಗಳನ್ನು ಡಂಪ್ ಮಾಡಲಾಗುತ್ತಿದೆ. ಹೀಗೆ ಡಂಪ್ ಮಾಡಿದ ಕೊಳೆತ ತ್ಯಾಜ್ಯದ ನೀರು ನೇರವಾಗಿ ಸಾವಿರಾರು ಜನ ಕುಡಿಯುವ ನೇತ್ರಾವತಿ ನದಿ ಸೇರುತ್ತಿದೆ ಎಂದು ಬಂಟ್ವಾಳ ಹಾಗೂ ಮಂಗಳೂರು ಜನತೆಯಲ್ಲಿ ಆತಂಕ ಮೂಡಿದೆ.
ಅನೇಕ ವರ್ಷಗಳಿಂದ ಉಂಟಾಗಿರುವ ತ್ಯಾಜ್ಯದ ನಿರ್ವಹಣೆ ಹಾಗೂ ವಿಲೇವಾರಿ ಸಮಸ್ಯೆ ಗೆ ಪೂರ್ಣ ವಿರಾಮ ಹಾಕಲು ಪುರಸಭಾ ಇಲಾಖೆಯಿಂದ ಸಾಧ್ಯವಾಗದೆ ಇರುವುದು ಪುರಸಭಾ ಆಡಳಿತ ವೈಖರಿಯನ್ನು ಜನ ಪ್ರಶ್ನಿಸುವಂತಾಗಿದೆ.
ಕಂಚಿನಡ್ಕ ಪದವು ಎಂಬಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ನ್ಯಾಯಾಲಯ ಅದೇಶ ನೀಡಿದರು ಇಲಾಖೆ ಪೂರ್ಣಪ್ರಮಾಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ಘಟಕವನ್ನು ಪೂರ್ಣಗೊಳಿಸಲು ಶಕ್ತವಾಗಿಲ್ಲ. ಇತ್ತೀಚೆಗೆ ಶಾಸಕರು ಕೂಡ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗದೆ ಇರುವುದರ ಬಗ್ಗೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.ಪ್ರಸ್ತುತ ತ್ಯಾಜ್ಯಗಳು ನೇತ್ರಾವತಿ ನದಿ ನೀರಿಗೆ ಸೇರುತ್ತಿರುವುದು ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ.