ಉಡುಪಿಯಲ್ಲಿ ಇರುವ ಬೀಡಿನಗುಡ್ಡೆ ಈ ಹಿಂದೆ ತ್ಯಾಜ್ಯ ಮುಕ್ತವಾಗಲು ಹೊರಟಿತ್ತು. ಸಾಕಷ್ಟು ಸ್ವಚ್ಚತಾ ಕೆಲಸ, ನಿರಂತರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದಿದ್ದವು. ಆದರೆ ಇದೀಗ ಬೀಡಿನಗುಡ್ಡೆ ತ್ಯಾಜ್ಯ ಮುಕ್ತವಾಗುವ ಪರಿಸ್ಥಿತಿ ಕಾಣಿಸುತ್ತಿಲ್ಲ. ಇದಕ್ಕೆ ಕಾರಣ ಸಾರ್ವಜನಿಕರ ನಿರ್ಲಕ್ಷ್ಯ.
ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಇಲ್ಲಿ ರಾಶಿ ಬಿದ್ದಿವೆ ಎಂದು ಸ್ಥಳೀಯರು ದೂರಿದ್ದಾರೆ. ನಗರಸಭೆ ಸಿಬಂದಿ ಇತ್ತೀಚೆಗೆ ಸ್ವತ್ಛಗೊಳಿಸಿದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಬಯಲು ರಂಗ ಮಂದಿರದ ಎದುರು ಪೂರ್ತಿ ತ್ಯಾಜ್ಯಗಳು ಚೆಲ್ಲಾಡಿ ಬಿದ್ದಿವೆ. ದೊಡ್ಡದೊಡ್ಡ ಗಂಟುಗಳಲ್ಲಿ ತ್ಯಾಜ್ಯವನ್ನು ಕಟ್ಟಿ ಇಲ್ಲಿ ಎಸೆಯಲಾಗಿದೆ.
ಕೋಳಿ, ಮೀನು ಮಾಂಸದ ತ್ಯಾಜ್ಯ, ಮದ್ಯ ಬಾಟಲಿ, ತರಕಾರಿ ತ್ಯಾಜ್ಯ, ಕೊಳೆತ ಆಹಾರಗಳು, ಪ್ಲಾಸ್ಟಿಕ್ ಬಾಟಲಿ, ದೊಡ್ಡ ಗಂಟುಗಳಾಗಿ ಮಾಡಿ ಇಲ್ಲಿ ಎಸೆಯಲಾಗಿದೆ. ಇದರಿಂದ ದುರ್ನಾಥ ಬೀಳುತ್ತಿದೆ.
ಚರಂಡಿಗಳಲ್ಲಿ ಮಳೆ ನೀರು ಕೂಡ ಹೋಗುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿನ ಮೋರಿಗಳಲ್ಲಿ ಎಸೆಯುವ ಕಸ ನಿಂತು ನೀರು ಸರಾಗವಾಗಿ ಹೋಗುತ್ತಿಲ್ಲ. ಇದಕ್ಕೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.