ಸುಳ್ಯ: ಹಲವು ಬಾರಿ ಸಮನ್ಸ್ ಜಾರಿ ಗೊಳಿಸಿದ್ದರು ಸಾಕ್ಷಿ ಹೇಳಲು ಹಾಜರಾಗದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಇಲ್ಲಿನ ನ್ಯಾಯಾಲಯವು ಮಂಗಳವಾರ ವಾರೆಂಟ್ ಜಾರಿ ಮಾಡಿದೆ.
ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ ಅವರು ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಅಸಮರ್ಪಕ ಪೊರೈಕೆ ಬಗ್ಗೆ ಮಾತನಾಡಲು ದೂರವಾಣಿ ಕರೆ ಮಾಡಿದ್ದರು. 2016 ರ ಫೆ.28 ರಂದು ನಡೆದಿದ್ದ ಈ ಸಂಭಾಷಣೆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಈ ಕುರಿತು ಡಿಕೆಶಿಯವರು, ಮೆಸ್ಕಾಂ ಎಂಡಿ ಹಾಗೂ ಸುಳ್ಯ ಕಚೇರಿಯ ಅಂದಿನ ಪ್ರಭಾರ ಎಇಇ ಹರೀಶ್ ನಾಯ್ಕ ಮೂಲಕ ಸಾಯಿ ಗಿರಿಧರ ವಿರುದ್ಧ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಾಯಿ ಗಿರಿಧರ ರೈ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಸಾಕ್ಷಿಯಾಗಿದ್ದು, ನ್ಯಾಯಾಲಯದ ಸಮನ್ಸ್ ಬಳಿಕವೂ ವಿಚಾರಣೆಗೆ ಹಾಗೂ ಸಾಕ್ಷಿಗೆ ಹಾಜರಾಗಿರಲಿಲ್ಲ.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಐಜಿಪಿ ಹಾಗೂ ಡಿಐಜಿಗೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಸೆ.29 ಕ್ಕೆ ಮುಂದೂಡಲಾಗಿದೆ.