ಪುತ್ತೂರು: ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಾಹಿತ್ಯ ಕೆ.ಪಿ. ಭಾಗವಹಿಸಿದ್ದಾರೆ.
ಸಾಹಿತ್ಯ ಮೂಲತಃ ಸುಳ್ಯದ ಕೇರ್ಪಳ ಪುರುಷೋತ್ತಮ ಮತ್ತು ಆರತಿ ದಂಪತಿಯ ಪುತ್ರಿ. ತನ್ನ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಡ್ಸ್ ಸುಳ್ಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿ ಅರಂತೋಡಿನ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿ ಇದೀಗ ಪುತ್ತೂರಿನಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಭೂತ ಪೂರ್ಣ ಸಾಧನೆ ಮಾಡಿರುವ ಸಾಹಿತ್ಯ ಎನ್ಸಿಸಿ ಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಶಿಸ್ತಿನ ಸಿಪಾಯಿಯಾಗಿದ್ದಾರೆ. ಎನ್ಸಿಸಿಯಲ್ಲಿ ಚುರುಕಿನ ಚಿನ್ನಾರಿಯಾಗಿರುವ ಇವರು ಕೊಡಗಿನ ಸೈನಿಕ್ ಸ್ಕೂಲ್ ನಲ್ಲಿ ಮೇ 16 ರಿಂದ 25ರವರೆಗೆ ನಡೆದ ಸಿಎಟಿಸಿ ಕ್ಯಾಂಪ್ ನಲ್ಲಿ ಭಾಗವಹಿಸಿ ಅಲ್ಲಿ ಇವರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆಚ್ಚಿ 75ನೇ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ತಂಡದಲ್ಲಿ ಭಾಗಿಯಾಗಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದ ಇವರ ಸಾಧನೆಗೆ ಊರಿಗೆ ಊರೇ ಸಂಭ್ರಮಿಸುವಂತೆ ಮಾಡಿದೆ.