ಬಂಟ್ವಾಳ ವಿಟ್ಲದಲ್ಲಿ ಹಾಡಹಗಲೇ ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೃತ ಮಹಿಳೆ ಶಕುಂತಳಾ ಅವರ ಪತಿ ಸಂಜೀವ ಅವರು ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ದೂರು ನೀಡಿರುವ ಮೃತ ಮಹಿಳೆ ಶಕುಂತಲಾ ಪತಿ ಸಂಜೀವ, ನನ್ನ ಹೆಂಡತಿ ಶಕುಂತಳಾ ಸುಮಾರು 5 ವರ್ಷಗಳಿಂದ ಪುತ್ತೂರಿನ ಕೊಂಬೆಟ್ಟು ಇನ್ ಲ್ಯಾಂಡ್ ಕಟ್ಟಡದ ಎದುರಿನಲ್ಲಿ ವಿನಾಯಕ ಎಂಬ ಕ್ಯಾಂಟೀನ್ ನಡೆಸುತ್ತಿದ್ದಳು . ಇತ್ತೀಚೆಗೆ 1 ವರ್ಷದಿಂದ ಸ್ಕೂಟರ್ ನಲ್ಲಿ ಪುತ್ತೂರಿಗೆ ಹೋಗಿ ಬರುತ್ತಿದ್ದು, ಮೊದಲು ಯಮನಾಜೆಯ ಶ್ರೀಧರ ಎಂಬಾತನ ರಿಕ್ಷಾದಲ್ಲಿ ಹೋಗುತ್ತಿದ್ದಳು. ಆದರೆ ಸುಮಾರು 1 ವರ್ಷದ ಹಿಂದೆ ಶ್ರೀಧರ ನಮ್ಮ ಮನೆಯ ಬಳಿ ಬಂದು ತನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಆತ ಸುಮ್ಮನಾಗಿದ್ದ.ಆದರೆ ಗುರಾಯಿಸಿಕೊಂಡು ಹೋಗುತ್ತಿರುವುದಾಗಿಯೂ , ಆತನನ್ನು ಕಂಡರೆ ನನಗೆ ಹದರಿಕೆ ಆಗುತ್ತಿದೆ ಎಂಬುದಾಗಿ ನನ್ನಲ್ಲಿ ಪತ್ನಿ ಹೇಳುತ್ತಿದ್ದಳು . ಇಂದು ಮಧ್ಯಾಹ್ನ 3.15 ಗಂಟೆ ನನಗೆ ಅನಂತಾಡಿಯ ಸಂತೋಷ್ ಎಂಬಾತ ಕರೆ ಮಾಡಿ ಹೆಂಡತಿ ಶಕುಂತಳಾರಿಗೆ ಕೊಡಾಜೆಯಲ್ಲಿ ಆಟೋರಿಕ್ಷಾ ಕೆಎ21 ಬಿ 6071 ನೇಯದರ ಚಾಲಕರು ಚೂರಿಯಿಂದ ಹೊಟ್ಟೆಗೆ ಹಾಗೂ ದೇಹದ ಇತರ ಭಾಗಕ್ಕೆ ತಿವಿದು ಗಾಯಗೊಳಿಸಿದ್ದು ಆಕೆಯನ್ನು ಮಾಣಿಯಿಂದ ಅಂಬ್ಯಲೆನ್ಸ್ ನವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದ್ದಾರೆ.
ನಾನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಹೆಂಡತಿಯ ಮುಖ, ಕೈಹೊಟ್ಟೆ, ತಲೆಯ ಭಾಗ ಹಾಗೂ ದೇಹದ ಇತರ ಕಡೆಗಳಲ್ಲಿ ರಕ್ತಗಾಯವಾಗಿ ವಿಪರೀತ ರಕ್ತಸ್ರಾವವಾಗಿ ಮಧ್ಯಾಹ್ನ 3.30 ಗಂಟೆ ಸಮಯಕ್ಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ನಂತರ ಸಂಬಂಧಿಕರ ಮೊಬೈಲ್ ಗೆ ವಾಟ್ಸಾಪ್ ಮುಖಾಂತರ ವೀಡಿಯೊ ಒಂದು ಬಂದಿದ್ದು ಇದರಲ್ಲಿ ಆಟೋ ಸಂಖ್ಯೆ ಕೆಎ 21 ಬಿ 6071 ನೇದರ ಚಾಲಕ ಗಣೇಶ್ ನಗರದ ಜನಪ್ರಿಯ ಹಾಲ್ ನ ಎದರು ಹೆದ್ದಾರಿಯ ಬದಿಯಲ್ಲಿ ಸಮಯ ಮಧ್ಯಾಹ್ನ 2.50 ಗಂಟೆಯಿಂದ 3.00 ಗಂಟೆ ಅವಧಿಯಲ್ಲಿ ನನ್ನ ಹೆಂಡತಿಗೆ ತಿವಿದು ಗಾಯಗೊಳಿಸಿರುವುದನ್ನು ಖಾಸಗಿ ಬಸ್ಸು ಚಾಲಕರೊಬ್ಬರು ವಿಡಿಯೋ ಮಾಡಿರುವುದು ತಿಳಿಯಿತು .ಆಗ ಶ್ರೀಧರನೇ ಕೊಲೆ ಮಾಡಿರುವುದು ನನಗೆ ತಿಳಿಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ..


