ಸುಳ್ಯ: ಸಚಿವ ಎಸ್. ಅಂಗಾರ ಅವರ ಸ್ವಕ್ಷೇತ್ರದಲ್ಲಿ ಸೇತುವೆ ಸಂಪರ್ಕವಿಲ್ಲದೇ ತುಂಬಿ ಹರಿಯುವ ನದಿಯಲ್ಲಿ ಮಹಿಳೆಯನ್ನು ಚಿಕಿತ್ಸೆಗಾಗಿ ಸ್ಥಳೀಯರು ಎತ್ತಿಕೊಂಡು ಹೋದ ಘಟನೆ ನಡೆದಿದೆ. ಸುಳ್ಯ ತಾಲೂಕಿನ ಜಾಲ್ಸೂರಿನ ಮರಸಂಕ ಎಂಬಲ್ಲಿ ಈ ಘಟನೆ ನಡೆದಿದೆ. ಮರಸಂಕ ನಿವಾಸಿ ದೇವಕಿ ಎಂಬವರು ಮನೆಯಲ್ಲಿ ಕಾಲು ಜಾರಿ ಬಿದ್ದು, ಕಾಲು ಮುರಿತಕ್ಕೊಳಗಾಗಿದ್ದರು.
ಮರಸಂಕ ಊರಿಗೆ ಹೋಗಲು ರಸ್ತೆ ಮತ್ತು ಸೇತುವೆಯೇ ಇಲ್ಲದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಎಡೆಬಿಡದೇ ಸುರಿಯುವ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹೊಳೆಯನ್ನು ಪ್ರಾಣವನ್ನೇ ಪಣಕ್ಕಿಟ್ಟು ದಾಟುವಂತಾಗಿದೆ. ತುಂಬಿ ಹರಿಯುವ ಹೊಳೆಯಲ್ಲಿ ಮಹಿಳೆಯನ್ನು ದೇವಕಿಯನ್ನು ಎತ್ತಿಕೊಂಡು ಸಾಗಿಸಿದ ಸ್ಥಳೀಯರು ಸ್ಟ್ರೇಚರ್ ನಲ್ಲಿ ಮಹಿಳೆಯನ್ನು ಹೊತ್ತುಕೊಂಡು ಹೋಗಿದ್ದಾರೆ.
ಹೊಳೆ ದಾಟಿದ ಬಳಿಕ ಅಂಬುಲೆನ್ಸ್ ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮರಸಂಕ ಊರಿನಲ್ಲಿ 50ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಹರಿಯುವ ಹೊಳೆಯನ್ನೇ ದಾಟಿ ಹೋಗಬೇಕಾಗಿದೆ.