ಮೂಡಬಿದರೆ:ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶವನ್ನು ನೀಡಿದ್ದರು. ಅಲ್ಲದೇ ವಿದ್ಯಾಗಮ ಯೋಜನೆಯಿಂದಾಗಿ ಇಲ್ಲಿವರೆಗೂ ಕೊರೊನಾ ಸೋಂಕು ತಗುಲಿರುವ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.ಆದರೆ ಇದೀಗ ವಿದ್ಯಾಗಮ ಯೋಜನೆಯಡಿ ವಿವಿಧ ಕಡೆಗಳಿಗೆ ಪಾಠ ಮಾಡಲು ಹೋಗುತ್ತಿದ್ದ ಮೂಡಬಿದರೆಯ ಶಿಕ್ಷಕಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೂಡುಬಿದಿರೆ ನೆಹರೂ ಮಕ್ಕಿ ಅನುದಾನಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಪದ್ಮಾಕ್ಷಿ ಎನ್. ಅವರು ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಪಾಠ ಮಾಡಲು ವಿವಿಧೆಡೆಗಳಿಗೆ ಹೋಗುತ್ತಿದ್ದರು. ಯೋಜನೆ ಆರಂಭಕ್ಕೆ ಮುನ್ನ ಎಲ್ಲಿಯೂ ಹೋಗಿಲ್ಲ. ಅವರಿಗೆ ಇತರ ಯಾವುದೇ ಕಾಯಿಲೆಯೂ ಇಲ್ಲ. ಇದೀಗ ಪಾಠ ಮಾಡಲು ಹೊರ ಹೋದ ಬಳಿಕ ಕಳೆದ 15 ದಿನಗಳ ಹಿಂದೆ ಸೆ. 29ಕ್ಕೆ ತಾಯಿಗೆ ಕೊರೊನಾ ದೃಢಪಟ್ಟಿದ್ದು, ಆರಂಭದಿಂದಲೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸುವುದಕ್ಕೂ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಶಿಕ್ಷಕಿಗೆ ಮಾತ್ರವಲ್ಲದೇ ಶಿಕ್ಷಕ ವೃತ್ತಿ ನಿರ್ವಹಿಸುತ್ತಿರುವ ಅವರ ಪತಿಗೂ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಇವರ ಪುತ್ರಿ ಐಶ್ವರ್ಯಾ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದು ಹಾಕುವ ಮೂಲಕ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಫೇಸ್ಬುಕ್ನಲ್ಲಿ ಪೋಸ್ಟ್ ನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಎಸ್. ಸುರೇಶ್ ಕುಮಾರ್, ಡಾ| ಕೆ. ಸುಧಾಕರ್ ಮೊದಲಾದವರಿಗೆ ಟ್ಯಾಗ್ ಮಾಡಿದ್ದು, ಈ ಪೈಕಿ ಕೆಲವು ಜನಪ್ರತಿನಿಧಿಗಳು, ಜತೆಗಾರರು ಐಶ್ವರ್ಯಾ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ.