ಕೋಝಿಕ್ಕೋಡ್: ಗಾಯಗೊಂಡವರು ನೋವಿನಿಂದ ನರಳುತ್ತಾ ಬೊಬ್ಬಿಡುತ್ತಿರುವುದು, ಮಕ್ಕಳು ತಮ್ಮ ಪೋಷಕರಿಗಾಗಿ ಹುಡುಕಾಡುತ್ತಿರುವುದು, ಇನ್ನು ಕೆಲವರು ತಾವು ಹೇಗೆ ಹಠಾತ್ತನೆ ಬಿದ್ದೆವು, ಏನಾಯಿತು ಎಂದು ಆಘಾತದಿಂದ ನೋಡುತ್ತಿರುವ ದೃಶ್ಯ ಎಂತವರ ಕಣ್ಣಾಲಿಗಳನ್ನು ತೇವಗೊಳಿಸುವಂತಿತ್ತು.
ನಿನ್ನೆ ರಾತ್ರಿ ಕೋಝಿಕ್ಕೋಡ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದವರು, ಗಾಯಗೊಂಡವರನ್ನು ವೀಲ್ ಚೇರ್, ಸ್ಟ್ರೆಚರ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಸಾಗಿಸುತ್ತಿರುವಾಗ ಈ ದೃಶ್ಯಗಳು ಸಾಮಾನ್ಯವಾಗಿದ್ದವು.
ಕೋಝಿಕ್ಕೋಡ್ ಸಮೀಪ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆಸಾಯಂಕಾಲ 7.40ಕ್ಕೆ ದುಬೈಯಿಂದ 190ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ತಂಡ ಏರ್ ಇಂಡಿಯಾ ವಿಮಾನ ರನ್ ವೇಯಲ್ಲಿ ಜಾರಿ 50 ಅಡಿ ಆಳದ ಕಂದಕಕ್ಕೆ ಅಪ್ಪಳಿಸಿ ಎರಡು ಹೋಳಾಯಿತು, ಪೈಲಟ್ ಸಾಧ್ಯವಾದಷ್ಟು ಅಪಘಾತ ತಪ್ಪಿಸಲು ಯತ್ನಿಸಿದ್ದರು. ಅವರ ಸಮಯ ಪ್ರಜ್ಞೆಯಿಂದಾಗಿ ವಿಮಾನ ಹೊತ್ತಿ ಉರಿಯುವುದು ತಪ್ಪಿಹೋಗಿತ್ತು. ಇದರಿಂದ ಹಲವು ಜೀವಗಳು ಉಳಿಯಿತು.
ಆರಂಭದಲ್ಲಿ ನಾವು ಸಣ್ಣ ಅಪಘಾತ ಅಂದುಕೊಂಡೆವು. ಆಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಕರೆತರುತ್ತಲೇ ಇದ್ದರು. ಇಲ್ಲಿ 24 ಮಂದಿ ದಾಖಲಾಗಿದ್ದು ಅವರಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಪಘಾತ ವಿಭಾಗದ ವೈದ್ಯರೊಬ್ಬರು ತಿಳಿಸಿದ್ದಾರೆ.
ಏನಾಯಿತು ಎಂದು ತಿಳಿದುಕೊಳ್ಳಲು ಸಮಯವಿರಲಿಲ್ಲ, ಕೆಲವು ಮಕ್ಕಳು ಜೋರಾಗಿ ಅಳುತ್ತಿದ್ದರು. ಇನ್ನು ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಬೇಬಿ ಸ್ಮಾರಕ ಆಸ್ಪತ್ರೆಯ ಮುಖ್ಯ ಮಾರುಕಟ್ಟೆ ಅಧಿಕಾರಿ ಸುರೇಶ್ ತಂಪಿ ಹೇಳಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಪೈಲಟ್ ಕಮಾಂಡರ್ ದೀಪಕ್ ವಸಂತ್ ಸಾಠೆ ಮತ್ತು ಕ್ಯಾಪ್ಟನ್ ಅಖಿಲೇಶ್ ಕುಮಾರ್ ಅವರ ಮೃತದೇಹಗಳನ್ನು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಆಸ್ಪತ್ರೆಯಲ್ಲಿ 33 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಗಾಯಾಳುಗಳನ್ನು ಬೀಚ್, ಮೈತ್ರ, ಇಖ್ರಾ, ಆಸ್ಟರ್ ಪಂತೀರಂಕವು ಮತ್ತು ರೆಡ್ ಕ್ರೆಸೆಂಟ್ ಫೆರೊಕ್ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.