ಬೆಳ್ತಂಗಡಿ: ಭೂಮಿ ವಿಚಾರಕ್ಕೆ ಗಲಾಟೆ ನಡೆದು ಕಾರ್ಣಿಕ ದೈವ ಕೊರಗಜ್ಜನ ಗುಡಿಗೇ ಬೆಂಕಿ ಹಚ್ಚಿದ ಘಟನೆ ವೇಣೂರು ಗ್ರಾಮದ ಬಾಡಾರಿನ ಕೊರಗಕಲ್ಲು ಬಳಿಯ ಕೊರಗಜ್ಜನ ಕಟ್ಟೆಯಲ್ಲಿ ಜು.11 ರಂದು ನಡೆದಿತ್ತು.
ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಐದು ಜನರ ಮೇಲೆ ಪ್ರಕರಣ ದಾಖಲಾಗಿ ಓರ್ವ ಆರೋಪಿ ಹರೀಶ್ ಪೂಜಾರಿಯನ್ನು ಬಂಧಿಸಿದ್ದರು. ಬಳಿಕ ಮತ್ತೆ ಕೌಂಟರ್ ಅಗಿ 13 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇದರಿಂದ ಊರವರು ಇದರ ತನಿಖೆಗೆ ಆಗ್ರಹಿಸಿದ್ದರು.
ಈ ಹಿನ್ನಲೆ ಇಂದು (ಜು.17) ರಂದು ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ನೇತೃತ್ವದಲ್ಲಿ ಜಾಗದ ಸರ್ವೆ ನಡೆದಿದ್ದು ಸರ್ವೆಯಲ್ಲಿ ಕೊರಗಜ್ಜನ ಕಟ್ಟೆ ಇರುವ ಸ್ಥಳ ಸರಕಾರಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ.
ಊರವರ ಸಹಕರದಲ್ಲಿ ನಡೆದ ಸರ್ವೆ ಕಾರ್ಯದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಸುರೇಶ್ ಕುಮಾರ್ ಮತ್ತು ಸಿಬ್ಬಂದಿ, ಸರ್ವೆ ಇಲಾಖೆ ಅಧಿಕಾರಿಗಳು, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದಕುಮಾರ್, ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೌಮ್ಯ ಮತ್ತು ಸಬ್ ಇನ್ಸ್ಪೆಕ್ಟರ್ ಆನಂದ ಹಾಗೂ 20 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭದ್ರತೆ ವಹಿಸಿದರು.
ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಬಾಡಾರಿನ ಕೊರಗಕಲ್ಲು ಬಳಿ ಕೊರಗಜ್ಜನ ಕಟ್ಟೆ ಇದೆ. ಸಾರ್ವಜನಿಕರು ಸಮಿತಿ ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು. ಆದರೆ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಸಾರ್ವಜನಿಕ ಹಸ್ತಕ್ಷೇಪ ಮಾಡಬಾರದೆಂದು ತಗಾದೆ ಎತ್ತಿದ್ದರು. ಈ ತಗಾದೆ ಕೆಲವು ವರ್ಷಗಳಿಂದ ಏರ್ಪಟ್ಟಿತ್ತು. ಬಳಿಕ ಆ ವ್ಯಕ್ತಿ ಗುಡಿಗೆ ಜುಲೈ 11 ರಂದು ಹರೀಶ್ ಪೂಜಾರಿ ಬೆಂಕಿ ಹಚ್ಚಿದ್ದು, ಇದನ್ನು ಖಂಡಿಸಿದ ಸ್ವಾಮಿ ಕೊರಗಜ್ಜ ಸಮಿತಿಯು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.