ಬೆಳ್ತಂಗಡಿ: ವೇಣೂರು ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಏಳು ದಿನ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಇಬ್ಬರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ಫೆ.5 ರಂದು ಹಾಜರುಪಡಿಸಿದ್ದು ಇದೀಗ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವೇಣೂರು ನಿವಾಸಿ ಸೈಯದ್ ಬಶೀರ್(47) ಮತ್ತು ಹಾಸನದ ಕಿರಣ್ (24) ಎಂಬುವರನ್ನು ಜ.28 ರಂದು ರಾತ್ರಿ ಪರಾರಿಯಾಗುತ್ತಿದ್ದಾಗ ಸುಳ್ಯದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ಜ.29 ರಂದು ರಾತ್ರಿ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದರು. ನಂತರ ನ್ಯಾಯಾಂಗ ಬಂಧನ ವಿಧಿಸಿ ಜ.30 ರಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಲು ಆದೇಶ ಮಾಡಲಾಗಿತ್ತು. ಅದರಂತೆಯೇ ತನಿಖಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಆರೋಪಿಗಳಿಬ್ಬರನ್ನು ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಲ ದಂಡಾಧಿಕಾರಿಗಳ ಕೋರ್ಟ್ ನ ನ್ಯಾಯಧೀಶರಾದ ವಿಜಯೇಂದ್ರ ಮುಂದೆ ಹಾಜರು ಪಡಿಸಿದ್ದರು.
ಈ ವೇಳೆ ಪೊಲೀಸರ ಪರ ವಕೀಲರು ಘಟನೆಯ ಹೆಚ್ಚಿನ ವಿಚಾರಣೆಗೆ ಹತ್ತು ದಿನ ಪೊಲೀಸ್ ಕಸ್ಟಡಿ ಕೇಳಿದ್ದರು. ನ್ಯಾಯಾಧೀಶರು ಏಳು ದಿನ ಪೊಲೀಸ್ ಕಸ್ಟಡಿ ನೀಡಿದ್ದರು. ಅದರಂತೆ ಫೆ.5 ರಂದು(ಇಂದು) ಕಸ್ಟಡಿ ಅಂತ್ಯವಾಗಿರುವುದರಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಪೊಲೀಸರು ಹಾಜರುಪಡಿಸಿದ್ದು ಆರೋಪಿಗಳಿಬ್ಬರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.