ಬೆಳ್ತಂಗಡಿ: ಸೌಜನ್ಯ ಕೊಲೆ,ಅತ್ಯಾಚಾರ ಪ್ರಕರಣದಲ್ಲಿ ಸತ್ಯ ಹೇಳಿದರೆ ನನ್ನನ್ನು ಮುಗಿಸಿ ಬಿಡುತ್ತಾರೆ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದರು. ಆದರೆ ಇದೀಗ ನಾನು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಈ ಬಗ್ಗೆ ಪುತ್ತೂರಿನಲ್ಲಿ ಮಾತನಾಡಿದ ಅವರು ಸೌಜನ್ಯ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿದ್ದೇ ನಾನು, ವಿಧಾನಸಭೆಯಲ್ಲಿ ಈ ಬಗ್ಗೆ ಒತ್ತಾಯ ಮಾಡಿರುವುದೇ ನಾನು, 6 ತಿಂಗಳು ಸಿಬಿಐ ಚೆನ್ನಾಗಿ ತನಿಖೆ ಮಾಡಿದೆ, ಆದರೆ 6 ತಿಂಗಳ ಬಳಿಕ ಸಿಬಿಐ ಕವಚಿ ಬಿದ್ದಿದ್ದು, ತಪ್ಪು ದಾರಿಯಲ್ಲಿ ಹೋಗಿದೆ. ನನ್ನ ಪ್ರಕಾರ ಈ ಪ್ರಕರಣವನ್ನು ತನಿಖೆ ಮಾಡಿ ಆರೋಪಿಗಳ ಪತ್ತೆ ಹಚ್ಚಲು ಸಾಧ್ಯ, ಸಂದರ್ಭ ಬಂದಾಗ ಸೌಜನ್ಯ ವಿಚಾರದಲ್ಲಿ ಹೇಳಬೇಕಾದ ವಿಚಾರವನ್ನು ಹೇಳುತ್ತೇನೆ.
ಆದರೆ ಸತ್ಯ ಹೇಳಿದರೆ ನನ್ನನ್ನು ಕೊಲ್ಲುತ್ತಾರೆ ಎಂದು ನಾನು ಹೇಳೆ ಇಲ್ಲ ಎಂದರು. ಜೀವಂತವಾಗಿ ಯಾರಿಗೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ, ಜಿಲ್ಲೆಯಲ್ಲಿ,ತಾಲೂಕಿನಲ್ಲಿ ಎಷ್ಟೇ ದೊಡ್ಡವರಿಗೂ ಒಬ್ಬನನ್ನು ಕೊಲ್ಲಲು ಸಾಧ್ಯವಿಲ್ಲ, ಬೆಳ್ತಂಗಡಿಯಲ್ಲಿ ನಡೆದ ಸಭೆಯಲ್ಲಿ ದೇವರು ನನ್ನನ್ನು ರಕ್ಷಣೆ ಮಾಡುತ್ತಾರೆ ಎಂದಿದ್ದೆ, ಆದರೆ ನನ್ನ ಮಾತನ್ನು ಮಾಧ್ಯಮಗಳ ತಿರುಚಿವೆ ಎಂದಿದ್ದಾರೆ.