ಈಗಾಗಲೇ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ ಪಟಾಕಿಯಂತೆ ಡೈಲಾಗ್ ಹೇಳುತ್ತ, ಡ್ಯಾನ್ಸ್ ಮಾಡಿ ಕನ್ನಡ ಕಿರುತೆರೆ ಪ್ರಿಯರ ಮನಸ್ಸು ಗೆದ್ದಿದ್ದಾಳೆ. ಈ ಪೋರಿ ವಂಶಿಕಾ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆಯವರ ಮುಂದೆ ಶ್ಲೋಕವನ್ನು ಹೇಳಿ ಸೈ ಎನಿಸಿಕೊಂಡಿದ್ದಾಳೆ. “ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಂಶಿಕ ಹೇಳಿದ ಸ್ತೋತ್ರವ ತಂದೆಯಂತೆ ಆಲಿಸಿ ತಾಯಿಯಂತೆ ಅವಳಿಗೆ ಉಡುಗೊರೆ ಇತ್ತ ಧರ್ಮ ದೇವತೆಯ ಪ್ರೀತಿಯ ಪುತ್ರ ಶ್ರೀ ವೀರೇಂದ್ರ ಹೆಗ್ಗಡೆ ಅಪ್ಪಾಜಿ ಅವರಿಗೆ ಧನ್ಯವಾದಗಳು” ಎಂದು ಮಾಸ್ಟರ್ ಆನಂದ್ ಕುಟುಂಬ ಹೇಳಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಂಶಿಕಾ ಸ್ತೋತ್ರ ಹೇಳಿದ್ದಳು. ಅದನ್ನು ಕೇಳಿದ ವೀರೇಂದ್ರ ಹೆಗ್ಗಡೆಯವರು ವಂಶಿಕಾಗೆ ಉಡುಗೊರೆ ಕೂಡ ನೀಡಿದ್ದಾರೆ. ವಂಶಿಕಾ ಶ್ಲೋಕ ಹೇಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಕಲಕಲಾವಲ್ಲಭೆ, ಇಂತಹ ಮಗಳನ್ನು ಪಡೆದ ನೀವೇ ಧನ್ಯರು ಎಂದು ಆನಂದ್ ದಂಪತಿಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಸ್ಟರ್ ಆನಂದ್ ಕುಟುಂಬ ಹೋಗುವುದಕ್ಕೆ ಇನ್ನೊಂದು ಮುಖ್ಯ ಕಾರಣವಿತ್ತು. “ಧರ್ಮದ ನೆಲೆಬೀಡಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗ್ರೀನ್ ಗೆಳೆಯರು ತಂಡದಿಂದ ಅಳಿಲು ಸೇವೆ ಮಾಡಲಾಗಿದೆ” ಎಂದು ಮಾಸ್ಟರ್ ಆನಂದ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಂದರೆ ಗ್ರೀನ್ ಗೆಳೆಯರು ಎಂಬ ತಂಡದ ಮೂಲಕ ಮಾಸ್ಟರ್ ಆನಂದ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಅಂತೆಯೇ ಧರ್ಮಸ್ಥಳದಲ್ಲಿ ಕೂಡ ಸ್ವಚ್ಛತೆ ಮಾಡಲಾಗಿದೆ.