ಬೆಳ್ತಂಗಡಿ: ಕೊರೊನಾ ನಿರೋಧಕ ಲಸಿಕೆ ಅಭಿಯಾನದಡಿ ಸೋಮವಾರ ಬೆಳ್ತಂಗಡಿ ತಾಲೂಕಿನ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 12 ಗ್ರಾಮಗ ಳಲ್ಲಿ ಹಾಸಿಗೆ ಹಿಡಿದಿರುವ, ಎಂಡೋಸಲ್ಫಾನ್ ಸಂತ್ರಸ್ತರಿಗೆ, ಲಸಿಕಾ ಕೇಂದ್ರ ಗಳಿಗೆ ತೆರಳಲು ಅಸಾಧ್ಯವಾಗಿರುವ ಅಶಕ್ತ ಫಲಾನುಭವಿಗಳಿಗೆ ಹಾಗೂ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಮನೆ ಮನೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬಂದಿ ಭೇಟಿ ನೀಡಿ ಒಟ್ಟು 87 ಮಂದಿಗೆ ಲಸಿಕೆ ನೀಡಿದರು.
ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 10 ಉಪಕೇಂದ್ರಗಳಿದ್ದು ಕೇವಲ ಐದು ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಯುಷ್ ಗುತ್ತಿಗೆ ಆಧಾರದಲ್ಲಿ ಒಬ್ಬರು ವೈದ್ಯರು ಸೇವೆಯಲ್ಲಿದ್ದಾರೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜನವಸತಿ ಪ್ರದೇಶ ತೀರಾ ಗ್ರಾಮೀಣ ಭಾಗವಾಗಿದೆ. ಆದರೆ ತಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಆರೋಗ್ಯ ಕೇಂದ್ರ ಸಿಬ್ಬಂದಿಗಳು ನಿಭಾಯಿಸುತ್ತಿರುವುದು ಪ್ರಶಂಸನೀಯ. ಆದರೆ ಸರ್ಕಾರ ಮಾತ್ರ ಈ ಗ್ರಾಮಕ್ಕೆ ಕನಿಷ್ಟ ರಸ್ತೆ ಮಾರ್ಗ ಸಮರ್ಪಕ ಮೂಲಭೂತ ವ್ಯವಸ್ಥೆ ಕಲ್ಪಿಸದೆ ಜನರು, ಆರೋಗ್ಯ ಸಿಬ್ಬಂದಿಗಳು ಸಂಕಷ್ಟ ಅನುಭವಿಸುವಂತೆ ಮಾಡಿದೆ.
ಮೂಲಭೂತ ಸೌಕರ್ಯಗಳಿಲ್ಲದೆ ಎಷ್ಟೋ ಕುಟುಂಬಗಳಲ್ಲಿ ಹಿರಿಯ ನಾಗರಿಕರು, ರೋಗಿಗಳು ಮನೆಯಿಂದ ಹೊರಬರಲಾಗದೆ ಕಂಗಾಲಾಗಿದ್ದರು. ಅಂತಹ ಮನೆಗಳನ್ನು ಗುರುತಿಸಿ ಮನೆ ಮನೆಗಳಿಗೆ ಭೇಟಿಯನ್ನು ಕೊಟ್ಟು ಆರೋಗ್ಯ ಸೇವೆಯ ಜೊತೆಗೆ ಕೋವಿಡ್ ಲಸಿಕೆಯನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಟ್ಟ ಗುಡ್ಡಗಳನ್ನೇರಿ, ಹೊಳೆದಾಟಿ ನೂರಾರು ಕಿ.ಮೀ. ದಾರಿಯನ್ನು ನಡೆದುಕೊಂಡೇ ಹೋಗಿ ಸಂಕಷ್ಟದಲ್ಲಿದ್ದವರಿಗೆ ಆರೋಗ್ಯ ಭಾಗ್ಯ ಕರುಣಿಸುವ ಕಾಯಕವನ್ನು ಕಣಿಯೂರು ಆರೋಗ್ಯ ಕೇಂದ್ರದ ದಾದಿಯರು ಮಾಡುತ್ತಿರುವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.