ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತೀರಾ ಹದಗೆಟ್ಟಿದ್ದು ಹೊಂಡ, ಗುಂಡಿಗಳಿಂದ ಕೂಡಿ ಹಲವು ತಿಂಗಳುಗಳಿಂದ ವಾಹನಗಳ ಸುಗಮ ಸಂಚಾರಕ್ಕೆ ಸಾಧ್ಯವಾಗದೇ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಈ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸರಕಾರ ಮತ್ತು ಸ್ಥಳೀಯ ಸಂಸದ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಉಪ್ಪಿನಂಗಡಿ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯ ಸ್ವಾಗತಿಸಿ ಮಾತನಾಡಿದ ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಸಿದ್ದೀಕ್ ಕೆಎ ಮಾತನಾಡಿ ನೆಲ್ಯಾಡಿಯಿಂದ ಬಿಸಿರೋಡ್ ಹೆದ್ದಾರಿ ಸಂಚಾರದ ದುರಾವಸ್ಥೆಯಿಂದ ಆದಂತಹ ಅಪಘಾತಗಳು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಪಡುವ ಹರಸಾಹಸ ಮತ್ತು ಪ್ರಯಾಣಿಕರು ಪಡುವ ಸಂಕಷ್ಟಗಳು, ಹೆದ್ದಾರಿವುದ್ದಕ್ಕೂ ಕೆಟ್ಟು ನಿಂತ ಘನ ವಾಹನದ ಚಾಲಕರು ಪಡುವ ನಿತ್ಯ ರೋಧನೆಯ ಬಗ್ಗೆ ವಿವರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹೈದರ್ ನೀರ್ಸಾಲ್ ಮಾತನಾಡಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲರಿಗೆ ಹಿಂದಿ ಭಾಷೆಯ ಸಮಸ್ಯೆಯಿಂದಾಗಿ ಜಿಲ್ಲೆಯ ಅನೇಕ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದೆ. ಈ ಹದಗೆಟ್ಟ ರಸ್ತೆಯಿಂದಾಗಿ ತುರ್ತು ಚಿಕಿತ್ಸೆಗೋಸ್ಕರ ಸಕಲೇಶಪುರದಿಂದ ಗುಂಡ್ಯ ಮಾರ್ಗವಾಗಿ ಮಂಗಳೂರು ಆಸ್ಪತ್ರೆಗೆ ತಲುಪುವಾಗ ಹಲವಾರು ಜೀವವನ್ನು ಕಳೆದುಕೊಂಡಂತಹ ಘಟನೆಗಳು ಸಂಭವಿಸಿದೆ ಎಂದರು.
ಎಸ್ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ ನಮ್ಮ ಪಕ್ಷದ ವತಿಯಿಂದ ಬಿಸಿರೋಡಿನಲ್ಲಿ ಪ್ರತಿಭಟನೆ ನಡೆಸಿದ ಎರಡು ದಿನಗಳ ನಂತರ ಹೆದ್ದಾರಿಯಲ್ಲಿರುವ ಗುಂಡಿಗೆ ತೇಪೆ ಹಚ್ಚುವ ಕೆಲಸವನ್ನು ಮಾಡಿದರು, ಇದಕ್ಕಾಗಿ 16 ಕೋಟಿ ರೂಪಾಯಿಗಳನ್ನು ಸರ್ಕಾರ ಪಾಸ್ ಮಾಡಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಎರಡೇ ಎರಡು ಮಳೆಗೆ ಹಚ್ಚಿದ ತೇಪೆಯು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ, ಈ ರೀತಿಯ ಕಣ್ಣುಕಟ್ಟಿನ ಕಳಪೆ ಡಾಮರೀಕರಣದಿಂದ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡುವುದು ಬಿಟ್ಟು ಶಾಶ್ವತ ಪರಿಹಾರ ಕಂಡುಕೊಳ್ಳಲಿ ಎಂದು ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಪ್ರ.ಕಾರ್ಯದರ್ಶಿ ಅಶ್ರಫ್ ಬಾವು. ಪಿಎಫ್ಐ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಲತೀಫಿ ಅಧ್ಯಕ್ಷರು ಎಸ್ಡಿಪಿಐ ಉಪ್ಪಿನಂಗಡಿ ವಲಯ, ಇಬ್ರಾಹಿಮ್ ಸಾಗರ್, ಮಹಮ್ಮದ್ ಪಿಬಿಕೆ, ಅಕ್ಬರ್ ಬೆಳ್ತಂಗಡಿ, ಶಾಕಿರ್ ಅಳಕೆಮಜಲು, ನಿಝಾರ್ ಕುದ್ರಡ್ಕ, ಮಜೀದ್ ಮಠ, ಶುಕೂರ್ ಕುಪ್ಪೆಟ್ಟಿ, ಇಲ್ಯಾಸ್ ಕರಾಯ, ಅಬ್ದುಲ್ ಹಮೀದ್ ಬಿಕೆ.ರಶೀದ್ ಕೊಡಿಪ್ಪಾಡಿ, ಬಶೀರ್ ಹಲ್ಯಾರ, ಸೇಸಪ್ಪ ನೆಕ್ಕಿಲು, ಸೀಮಾ ಅಬ್ದುಲ್ ರಝ್ಜಾಕ್, ಝಕರಿಯಾ ಕೊಡಿಪ್ಪಾಡಿ, ಮತ್ತಿತರರು ಉಪಸ್ಥಿತರಿದ್ದರು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಕೋಶಾಧಿಕಾರಿ ಇಕ್ಬಾಲ್ ಕೆಂಪಿ ಧನ್ಯವಾದಗೈದು, ಎಸ್ಡಿಪಿಐ ಪುತ್ತೂರು ನಗರಾಧ್ಯಕ್ಷ ಬಶೀರ್ ಕೂರ್ನಡ್ಕ ಕಾರ್ಯಕ್ರಮ ನಿರೂಪಿಸಿದರು.