ಉಪ್ಪಿನಂಗಡಿ: ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಪೊಲೀಸರು ದಾಳಿ ಮಾಡಿ ಸುಮಾರು 30 ಟನ್ ನಷ್ಟು ಮರಳು ವಶ ಪಡಿಸಿಕೊಂಡಿರುವ ಘಟನೆ ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ನಡೆದಿದೆ.
ಉಪ್ಪಿನಂಗಡಿ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುತೇಶ್ ಕೆ ಪಿ ಅವರು ದಿನಾಂಕ: 17-02-2026 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದಾಗ ಮಧ್ಯಾಹ್ನ 2 ಗಂಟೆ ವೇಳೆಗೆ ನೇತ್ರಾವತಿ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿರುವುದಾಗಿ ಮಾಹಿತಿ ಬಂದಿದೆ. ಅದರಂತೆ ಠಾಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಬರಲು ಹೇಳಿ ಇಬ್ಬರು ಪಂಚರೊಂದಿಗೆ 2. 50ಕ್ಕೆ ಈ ಸಾಕ್ಷ್ಯ ಮೂಲಕ ವಿಡಿಯೋ ಮಾಡಿಕೊಂಡು ಸ್ಥಳಕ್ಕೆ ಹೋದಾಗ ಸ್ಥಳದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದು ವಿಚಾರಿಸಲಾಗಿ ಜೈನುದ್ದೀನ್ ರವರ ನಿರ್ದೇಶನದಂತೆ ಮರಳು ಸಂಗ್ರಹಿಸುವುದಾಗಿ ತಿಳಿಸಿದ್ದಾರೆ. ಪರಿಶೀಲಿಸಲಾಗಿ ದಂಡೆಯ ಮೇಲೆ ಸುಮಾರು 30 ಟನ್ ನಷ್ಟು ಮರಳು ಶೇಖರಿಸಿರುವುದು ಕಂಡುತ್ತದೆ. ಮರಳಿನ ರಾಶಿಯ ಸಮೀಪ ದೋಣಿ-1, ಹಾರೆ-4, ಕಬ್ಬಿಣದ ಬಕೇಟ್ ಗಳು-11, ಪ್ಲಾಸ್ಟಿಕ್ ಬಕೆಟ್ ಗಳು-10 ಇದ್ದು ಸರಕಾರದ ಅನುಮತಿ ಇಲ್ಲದೇ ಸರಕಾರಿ ಜಾಗದಿಂದ ನದಿಯಿಂದ ಮರಳು ಕಳ್ಳತನ ಮಾಡಿ ದೋಣಿ ಮೂಲಕ ಸಾಗಿಸಿ ಇಲ್ಲಿ ಅಕ್ರಮ ದಾಸ್ತಾನು ಮಾಡಿರುವುದು ದೃಢಪಟ್ಟಿದೆ. ಸೊತ್ತುಗಳ ಅಂದಾಜು ಮೌಲ್ಯ ರೂ. 35,000/- ಆಗಬಹುದು ಎನ್ನಲಾಗಿದೆ.


