ಉಪ್ಪಿನಂಗಡಿಯಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ‘ಗೋಸನ್ಮಾನ ಅಭಿಯಾನ’ದ ಸಹಿ ಸಂಗ್ರಹಣಾ ಕಾರ್ಯಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಧಿಕೃತವಾಗಿ ಚಾಲನೆ ನೀಡಿದರು.
ಉತ್ಸವಕ್ಕೆ ಆಗಮಿಸಿದ ಸಂಸದರು ಶ್ರೀ ಮಹಾಗಣಪತಿಯ ದರ್ಶನ ಪಡೆದು, ಮಹಾಪೂಜಾ ಕೈಂಕರ್ಯಗಳಲ್ಲಿ ಭಕ್ತಿಯಿಂದ ಪಾಲ್ಗೊಂಡರು. ಬಳಿಕ ಸಮಿತಿಯ ಪ್ರಮುಖರೊಂದಿಗೆ ಸೇರಿ ಅಭಿಯಾನದ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಹಬ್ಬ-ಹರಿದಿನಗಳ ಧಾರ್ಮಿಕ ಆಚರಣೆಗಳ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯ ಪ್ರತೀಕವಾದ ಗೋವಂಶ ರಕ್ಷಣೆ ಹಾಗೂ ಗೋಸೇವೆಯಂತಹ ಸತ್ಕಾರ್ಯಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಕೈಜೋಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಗೋವಿನ ಮಹತ್ವ ಹಾಗೂ ಸಂರಕ್ಷಣೆಯ ಕುರಿತು ನಿರಂತರವಾಗಿ ಜನಜಾಗೃತಿ ಮೂಡಿಸಲಾಗುವುದು,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೋಸನ್ಮಾನ ಅಭಿಯಾನ ಸಮಿತಿಯ ಸಹ ಪ್ರಭಾರಿ ಅಶೋಕ್ ಇಳಂತಿಲ, ವ್ಯವಸ್ಥಾ ಪ್ರಮುಖರಾದ ಹೇರಂಭ ಶಾಸ್ತ್ರಿ ಉಪ್ಪಿನಂಗಡಿ, ಉಪ್ಪಿನಂಗಡಿ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸುನೀಲ್ ದಡ್ಡು, ಭಾಜಪ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು ಸುರೇಶ್ ಅತ್ರಮಜಲು ಉಪಾಧ್ಯಕ್ಷರು ವಿದ್ಯಾಧರ್ ಜೈನ್. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಆದೇಶ್ ಶೆಟ್ಟಿ ಉಪ್ಪಿನಂಗಡಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಬಿಜೆಪಿ ಮುಖಂಡರು, ವಿವಿಧ ಹಿಂದೂ ಹಾಗೂ ಧಾರ್ಮಿಕ ಸಂಘಟನೆಗಳ ಪ್ರಮುಖರು ಮತ್ತು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.


