ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಿಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದಾಳೆ. ಕೇರಳ ರಾಜ್ಯದ ಕಾರುಣ್ಯ ಲಾಟರಿಯಲ್ಲಿ 80 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಟೈಲರಿಂಗ್ ಅನ್ನು ನಂಬಿ ಜೀವನ ಸಾಗಿಸುತ್ತಿದ್ದ ಆನಂದ್ ಅವರಿಗೆ 72 ವರ್ಷ. ಸದ್ಯ ವಯೋ ಸಹಜ ಕಾಯಿಲೆಗಳಿಂದಾಗಿ ವೃತ್ತಿಗೆ ವಿದಾಯ ಹೇಳಿದ್ದರು. ಹಾಗಾಗಿ ಮನೆಯಲ್ಲೇ ಇದ್ದರು. ಆನಂದ್ ಅವರ ಒಬ್ಬಳು ಮಗಳನ್ನು ಕೇರಳ ಕಡೆಗೆ ಮದುವೆ ಮಾಡಿಕೊಟ್ಟಿರುವುದರಿಂದ ಆ ಕಡೆಗೆ ಹೋದಾಗ ಅಪರೂಪಕ್ಕೊಮ್ಮೆ ಅವರು ಲಾಟರಿ ಖರೀದಿಸುತ್ತಿದ್ದರು.ಕಳೆದ ಒಂದು ವಾರದ ಹಿಂದೆಯಷ್ಟೇ ಮಗಳ ಮನೆಗೆಂದು ಹೋಗಿದ್ದಾಗ ಇವರು ಕೇರಳ ರಾಜ್ಯದ ಕಾರುಣ್ಯ’ ಲಾಟರಿಯನ್ನು ಕಾಸರಗೋಡಿನ `ಬೊಳ್ಳು’ ಲಾಟರಿ ಏಜೆನ್ಸಿಯವರಿಂದ ಖರೀದಿಸಿದ್ದರು.ಎ.15ರಂದು ಆದ ಆ ಲಾಟರಿಯಲ್ಲಿ ಆನಂದ ಟೈಲರ್ ಅವರಿಗೆ ಪ್ರಥಮ ಬಹುಮಾನ ಮೊತ್ತ 80 ಲಕ್ಷ ರೂ. ಲಭಿಸಿದೆ.
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಆನಂದ್ ಅವರ ಕುಟುಂಬಕ್ಕೆ ಅದೃಷ್ಟ ಲಕ್ಷ್ಮೀಯ ರೂಪದಲ್ಲಿ ಲಾಟರಿ ಬಂದಿದ್ದು ಕುಟುಂಬದವರ ಸಂಭ್ರಮ ಹೇಳ ತೀರದಾಗಿದೆ.