ಮಂಗಳೂರು; ಮಹಿಳೆಯೊಬ್ಬರು ಮಗಳನ್ನು ಶಾಲೆಯಿಂದ ಕರೆ ತರುವಾಗ ಕಾರಿನಲ್ಲಿ ಬಂದು ಯುವಕರು ಬೆನ್ನಟ್ಟಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ನೆಕ್ಕೆಗುಡ್ಡೆ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮಹಿಳೆ ತನ್ನ ಮಗಳನ್ನು ಕರೆದುಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆನ್ನಲಾಗಿದೆ. ಈವೇಳೆ ಕಾರ್ ನಲ್ಲಿ ಇಬ್ಬರು ಯುವಕರು ಬಂದಿದ್ದು , ಅವರು ನೆಕ್ಕೆಗುಡ್ಡೆ ಬಳಿ ಕಾರು ನಿಲ್ಲಿಸಿ ಮಹಿಳೆ ಮತ್ತು ಮಗಳನ್ನು ಬೆನ್ನಟ್ಟಿ ಕೊಂಡು ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಹೆದರಿದ ಮಹಿಳೆ ಅಂಗಡಿ ಬಳಿ ರಕ್ಷಣೆ ಪಡೆದಿದ್ದು, ಈ ವೇಳೆ ಬೆನ್ನಟ್ಟಿ ಕೊಂಡು ಬಂದ ಯುವಕ ಸ್ಕೂಟರ್ ನಲ್ಲಿ ವಾಪಸ್ ಆಗಿದ್ದಾನೆ ಎನ್ನಲಾಗಿದೆ.
ಮಹಿಳೆ ಮತ್ತು ಮಗಳನ್ನು ಬೆನ್ನಟ್ಟಿ ಕೊಂಡು ಬಂದ ದೃಶ್ಯ ಸಿಸಿ ಕ್ಯಾಮೆರಾ ದಲ್ಲಿ ದಾಖಲಾಗಿದ್ದು, ಜಾಲತಾಣ ದಲ್ಲಿ ವೈರಲ್ ಆಗಿದೆ.ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಗೆ ಸಂಬಂಧಿಸಿ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.