ಮಂಗಳೂರು: ಶೈಕ್ಷಣಿಕ ಸಲಹೆಗಾರರಾದ ರಾಧಿಕ ಧೀಮಂತ್ ಸುವರ್ಣ ಅವರು ಓಣಂ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಕಾಸರಗೋಡು-ಉಡುಪಿ ರಸ್ತೆಯ ಪಂಪ್ವೆಲ್ ರಸ್ತೆಯಲ್ಲಿರುವ ಗುಂಡಿಗಳ ಸುತ್ತಲೂ ಪೂಕಳಂ ಮಾಡಿದ್ದಾರೆ.
ಪಂಪ್ವೆಲ್ ಫ್ಲೈಓವರ್ ಸಂಪೂರ್ಣವಾಗಲು ಹತ್ತು ವರ್ಷಗಳು ಬೇಕಾಯಿತು. ಇದು ಸಂಪೂರ್ಣಗೊಂಡ ಬಳಿಕ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಸರ್ವಿಸ್ ರಸ್ತೆಗಳು ಗುಂಡಿಗಳಿಂದ ಕೂಡಿದೆ. ಅಧಿಕಾರಿಗಳು ಮುಖ್ಯ ರಸ್ತೆಯ ಅಭಿವೃದ್ದಿಯತ್ತ ಮಾತ್ರವೇ ಗಮನ ಹರಿಸುತ್ತಾರೆ. ಆದರೆ, ಸರ್ವಿಸ್ ರಸ್ತೆಗಳ ಸ್ಥಿತಿ ಏನು? ಈ ರಸ್ತೆಗಳು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿವೆ.
ಅಪಘಾತಗಳಿಗೆ ಕಾರಣವಾಗುವ ಹಲವಾರು ಗುಂಡಿಗಳು ಸರ್ವಿಸ್ ರಸ್ತೆಯಲ್ಲಿದ್ದು, ಈಗಾಗಲೇ ಹಲವಾರು ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾನು ಹಾಗೂ ನನ್ನ ಸ್ನೇಹಿತೆಯರು ಈ ರಸ್ತೆಯಲ್ಲಿ ಪೂಕಳಂ ಮಾಡುವ ಆಲೋಚನೆಗೆ ಬಂದಿದ್ದೇವೆ ಎನ್ನುತ್ತಾರೆ ರಾಧಿಕ ಧೀಮಂತ್ ಸುವರ್ಣ.
ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಉದ್ಯೋಗದಲ್ಲಿರುವ ರಾಧಿಕಾ ಧೀಮಂತ್ ಸುವರ್ಣ ಅವರ ಸ್ನೇಹಿತರಾದ ಯುವಿಕಾ, ಸುಪ್ರಿತಾ ಹಾಗೂ ಮೇಕಪ್ ಕಲಾವಿದ ನೆಲೋಫರ್ ಈ ಜಾಗೃತಿ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.