ಉಡುಪಿ: ಚಂದ್ರಯಾನ 3 ನಿಲುಗಡೆ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ ಮಾಡಿದ್ದ ವಿಚಾರವಾಗಿ ಪ್ರಕಾಶ್ ರಾಜ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಹೇಳಿಕೆ ನೀಡಿದ ಶೋಭಾ ಕರಂದ್ಲಾಜೆ, ಪ್ರಕಾಶ್ ರಾಜ್ ಭಾರತವನ್ನು ಮತ್ತು ಭಾರತದ ವಿಚಾರಗಳನ್ನು ಪ್ರೀತಿಸುವುದಿಲ್ಲ, ಅವರಿಗೆ ಭಾರತದ ದುಡ್ಡು ಬೇಕು ಆದರೆ ಅವರ ಮನಸ್ಸು ಬೇರೆಲ್ಲೋ ಇರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಕಾಶ್ ರಾಜ್ ಅವರ ಮನಸ್ಸು ಎಲ್ಲಿದೆಯೋ ಅಲ್ಲಿಗೆ ಹೋದರೆ ಅವರು ಹೆಚ್ಚು ಖುಷಿಯಾಗಿ, ಆನಂದವಾಗಿರಬಹುದು, ದುಃಖ ಪಟ್ಟುಕೊಂಡು ಭಾರತ ದೇಶದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ ಎಂದಿರುವ ಕೇಂದ್ರ ಸಚಿವೆ, ನಮ್ಮ ದೇಶದಲ್ಲಿ ಇದ್ದು ನಮ್ಮ ಗಾಳಿ, ನೀರು ಸೇವಿಸಿ ಅಪಹಾಸ್ಯ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಚಂದ್ರನಲ್ಲಿ ಇಸ್ರೋ ಉಡ್ಡಯನ ಮಾಡಿರುವ ಚಂದ್ರಯಾನ ನೌಕೆ ಲ್ಯಾಂಡಿಂಗ್ ಬಗ್ಗೆ ಕೆಲವು ದಿನಗಳ ಹಿಂದೆ ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಬಳಿಕ ಇದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.