ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿಗೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿ ಬಂಧಿತರಾಗಿದ್ದ ಕೇಂದ್ರ ಸಚಿವ, ಬಿಜೆಪಿ ನಾಯಕ ನಾರಾಯಣ ರಾಣೆಯವರಿಗೆ ಮಹದ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮಂಗಳವಾರ ತಡರಾತ್ರಿ ಜಾಮೀನು ನೀಡಿದೆ.
ಬಂಧನ ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ರಾಣೆ ಅವರನ್ನು ಹಾಜರುಪಡಿಸಿದ ಪೊಲೀಸರು ಏಳು ದಿನ ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ರಾಣೆ ಪರ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು,ರಾಣೆ ಅವರ ಆರೋಗ್ಯ ಸರಿ ಇಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಾಧೀಶರು ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದರು. ಧ್ವನಿ ಪರೀಕ್ಷೆಗೆ ಮತ್ತು ವಿಚಾರಣೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ರಾಣೆ ಅವರಿಗೆ ಸೂಚಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸ್ವಾತಂತ್ರ್ಯ ದಿನ ಗೊತ್ತಿಲ್ಲ.ಭಾಷಣದ ವೇಳೆ ಹಿಂದಕ್ಕೆ ಬಾಗಿ, ಕೇಳಿದ್ದರು. ನಾನೇನಾದರೂ ಅಲ್ಲಿದ್ದಿದ್ದರೆ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದು ನಾರಾಯಣ ರಾಣೆ ಹೇಳಿದ್ದರು. ಅದು ಶಿವಸೇನೆ ಕಾರ್ಯಕರ್ತರಲ್ಲಿ ದೊಡ್ಡ ಮಟ್ಟದ ಆಕ್ರೋಶ ಹುಟ್ಟುಹಾಕಿತ್ತು.
ನಂತರ ನಾಸಿಕ್ ಪೊಲೀಸರು, ಚಿಪ್ಕುಲಾಕ್ಕೆ ತೆರಳಿ ಅಲ್ಲಿಂದ ನಾರಾಯಣ ರಾಣೆಯವರನ್ನು ಬಂಧಿಸಿದ್ದರು. ನಂತರ ಅವರನ್ನು ಮಹದ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ರಾತ್ರಿ 11.30ರ ಹೊತ್ತಿಗೆ ಅವರಿಗೆ ಜಾಮೀನು ಸಿಕ್ಕಿದೆ. ಹಾಗೇ, ಜಾಮೀನು ಬಾಂಡ್ 15,000 ರೂ.ನೀಡಬೇಕು ಮತ್ತು ಆಗಸ್ಟ್ 30 ಮತ್ತು ಸೆಪ್ಟೆಂಬರ್ 6ರಂದು ರಾಯಗಡ್ನಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.


