ಭೋಪಾಲ್: ಅಧಿಕಾರಶಾಹಿಯನ್ನು ದುರ್ಬಲಗೊಳಿಸುವ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಹಿರಿಯ ಬಿಜೆಪಿ ನಾಯಕಿ ಹಾಗು ಮಾಜಿ ಕೇಂದ್ರ ಸಚಿವೆ ಬಿಜೆಪಿಯ ಉಮಾಭಾರತಿ, ಆಡಳಿತಶಾಹಿ ಅಥವಾ ಅಧಿಕಾರಿಗಳು ಅಂದರೆ ಬೇರಾರೂ ಅಲ್ಲ. ನಮ್ಮ ಚಪ್ಪಲಿ ಎತ್ತಿಕೊಳ್ಳಲು ಸುತ್ತುವರಿದಿರುವವರು ಹಾಗೂ ಅವರಿಗೆ ‘ಯಾವುದೇ ನಿಲುವು (ಔಕತ್)’ ಇಲ್ಲ ಎಂದು ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.
ಅಧಿಕಾರಿಗಳಿಗೆ ನಮ್ಮ ಎದುರು ನಿಲ್ಲುವ ಯೋಗ್ಯತೆಯೂ ಇಲ್ಲ. ಅವರು ನಮ್ಮ ಚಪ್ಪಲಿ ಎತ್ತಿಕೊಳ್ಳಲು ಇರುವವರು ಅಷ್ಟೆ. ನಾವು ಅವರಿಗೆ ಅವಕಾಶ ಕೊಡಬೇಕಷ್ಟೇ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾಭಾರತಿ ಹೇಳಿದ್ದಾರೆ.
ಅಧಿಕಾರಿಗಳು ಅಂದರೆ ಏನು? ರಾಜಕಾರಣಿಗಳನ್ನು ನಿಯಂತ್ರಿಸುವವರು ಅಂದುಕೊಂಡಿದ್ದೀರಾ? ಇಲ್ಲ. ಅವರು ಮೊದಲು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ಆಮೇಲೆ ದಾಖಲೆ ಸಿದ್ಧಪಡಿಸುತ್ತಾರೆ. ಅಧಿಕಾರಿಗಳು ರಾಜಕಾರಣಿಗಳನ್ನು ನಿಯಂತ್ರಿಸುತ್ತಾರೆ ಎಂಬುದು ಮೂರ್ಖತನ. ನಾನು ಕೇಂದ್ರ ಸಚಿವೆಯಾಗಿ ಹಾಗೂ ಮುಖ್ಯಮಂತ್ರಿಯಾಗಿ 11 ವರ್ಷ ಆಡಳಿತ ನಡೆಸಿದ್ದೇನೆ. ಮೊದಲು ನಮ್ಮ ಜೊತೆ ಮಾತನಾಡಿದ ಮೇಲೆ ದಾಖಲೆ ಸಿದ್ಧಪಡಿಸುತ್ತಾರೆ ಅಷ್ಟೇ ಎಂದರು.