ಉಳ್ಳಾಲ: ಕೆಲದಿನಗಳ ಹಿಂದೆ ಆಝಾದ್ ನಗರದ 57 ವಯಸ್ಸಿನ ಮಹಿಳೆಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಘಟನೆಯ ನಂತರ ಮಹಿಳೆಯ ಕುಟುಂಬದ 16 ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಸಿದ್ದು, ಇಂದು ಬಂದ ವರದಿಯ ಪ್ರಕಾರ 16 ಮಂದಿಗೂ ಕೊರೋನಾ ಪಾಸಿಟಿವ್ ಆಗಿದೆ.

ಈ ಕುರಿತು ಅರೋಗ್ಯ ಇಲಾಖೆ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಾಗಿದೆ. ಒಂದೇ ಮನೆಯ 17 ಜನರಿಗೆ ಸೋಂಕು ದೃಢಪಟ್ಟಂತಾಗಿದೆ.
ಇದರೊಂದಿಗೆ ಉಳ್ಳಾಲ ವ್ಯಾಪ್ತಿಯಲ್ಲಿ ಪೊಲೀಸರು ಸೇರಿದಂತೆ 22 ಸೋಂಕು ಇಂದು ದೃಢವಾಗಿದ್ದು. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ದೇರಳಕಟ್ಟೆ, ಅಸೈಗೋಳಿ ಸೇರಿ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಉಳ್ಳಾಲ ಆಝಾದ್ ನಗರದ 57ರ ಹರೆಯದ ಮಹಿಳೆಗೆ ಆರಂಭದಲ್ಲಿ ಸೋಂಕು ತಗುಲಿತ್ತು. ಅವರಿಗೆ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಅವರ ಪ್ರಾಥಮಿಕ ಸಂಪರ್ಕ ಇದ್ದ ಎಲ್ಲಾ 16 ಮಂದಿ ಕುಟುಂಬದ ಸದಸ್ಯರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು ಇಂದು ಎಲ್ಲಾ 16 ಮಂದಿಗೆ ಸೋಂಕು ದೃಡವಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಈ ಹಿಂದೆ ಸೋಂಕು ತಗುಲಿತ್ತು. ಇವರ ಸಂಪರ್ಕದಲ್ಲಿದ್ದ ಇಬ್ಬರು ಸಿಬಂದಿಗಳಿಗೆ ಸೋಂಕು ದೃಢವಾಗಿದೆ. ಉಳಿದಂತೆ ವಿದೇಶದಿಂದ ಆಗಮಿಸಿ ಉಳ್ಳಾಲದ ಖಾಸಗಿ ರೆಸಾರ್ಟ್ನಲ್ಲಿ ಕ್ವಾರಂಟೈನ್ಲ್ಲಿರುವ ಕೃಷ್ಣಾಪುರ ಮೂಲದ ಇಬ್ಬರಿಗೆ ಸೋಂಕು ದೃಢವಾಗಿದೆ. ದೇರಳಕಟ್ಟೆಯ ಖಾಸಗಿ ಆಹಾರ ತಯಾರಿಕೆ ಸಂಸ್ಥೆಯ ಇಬ್ಬರಿಗೆ ಸೋಂಕು ದೃಢವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕ ಯು.ಟಿ. ಖಾದರ್ ಸೀಲ್ಡೌನ್ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


