ಬೆಳ್ತಂಗಡಿ: ಮನೆಯಲ್ಲಿ ಇಲ್ಲದ ವೇಳೆ ಹಾಡುಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ನಡೆದ ಘಟನೆ ಉಜಿರೆ ಕಲ್ಲೆಯಲ್ಲಿ ಆಗಸ್ಟ್ 12 ರಂದು ಮಧ್ಯಾಹ್ನ ನಡೆದಿದ್ದು.ಮನೆಯನ್ನು ಕಳ್ಳರು ಸಂಪೂರ್ಣ ಜಾಲಾಡಿ ಎಲ್ಲಾ ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೇಲಿಕ್ಸ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆದಿದ್ದು ಮನೆಯ ಕಾಪಾಡಿನಲ್ಲಿದ್ದ 15 ಪವನ್ ವಿವಿಧ ರೀತಿಯ ಚಿನ್ನಾಭರಣ ಹಾಗೂ 20,000 ಸಾವಿರ ರೂಪಾಯಿ ನಗದು ಕಳ್ಳತನವಾಗಿರುವುದಾಗಿ ತಿಳಿದು ಬಂದಿದೆ.
ಫೇಲಿಕ್ಸ್ ಅವರ ಮೊದಲ ಪುತ್ರಿ ಕಾಲೇಜು ಮುಗಿದ ಬಳಿಕ ಮಧ್ಯಾಹ್ನ 1:10 ರ ವೇಳೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.ಮನೆ ಮಾಲೀಕ ಫೇಲಿಕ್ಸ್ ಮೇಲಂತಬೆಟ್ಟು ಬಳಿ ಸೆಂಟ್ರಿಂಗ್ ಕೆಲಸಕ್ಕೆ ಹೋಗಿದ್ದು, ಪತ್ನಿ ಗ್ರೇಟಾ ಸ್ಥಳೀಯ ಶಾಲೆಯಲ್ಲಿ ಕೆಲಸಕ್ಕೆ ತೆರಳಿದ್ದರು. ಘಟನೆ ವಿಚಾರ ತಿಳಿದ ಪುತ್ರಿ ನೆರೆ ಮನೆಮಂದಿ ಮೂಲಕ ಪೋಷಕರಿಗೆ ಮಾಹಿತಿ ನೀಡಿದ್ದರು.ಮನೆಯ ಹಿಂಬಾಗಿಲ ಮೂಲಕ ಕಳ್ಳರು ಒಳಗೆ ನುಗ್ಗಿರುವುದಾಗಿ ತಿಳಿದುಬಂದಿದ್ದು, ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿ ಕಳ್ಳತನ ನಡೆಸಿರುವುದು ಪೊಲೀಸರ ತನಿಖೆ ವೇಳೆ ಮೇಲ್ನೋಟಕ್ಕೆ ತಿಳಿದುಬಂದಿದೆ.ಕಲ್ಲೆ ಸಮೀಪವೇ ಫ್ರಾಸಿಸ್ಸ್ ಲಸ್ರಾಧೋ ಮನೆ ಮತ್ತು ಅಥೋಣಿ ಮನೆಗೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕ ಫೇಲಿಕ್ಸ್ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರೋಪಿಗಳ ಪತ್ತೆಗೆ ಟೆಕ್ನಿಕಲ್ ಸಾಕ್ಷ್ಯ ಸಂಗ್ರಹ : ಬೆಳ್ತಂಗಡಿ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಚರಣ್ ರಾಜ್, ಇಬ್ರಾಹಿಂ, ವೆಂಕಟೇಶ್,ಮೋಹನ್, ಧರೆಯಪ್ಪ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ರಾಜೇಶ್ ಮತ್ತು ಮಲ್ಲಿಕಾರ್ಜುನ ಘಟನಾ ಸ್ಥಳದಲ್ಲಿದುಕೊಂಡು ಟೆಕ್ನಿಕಲ್ ಕಿಟ್ ಬಳಸಿ ಟೆಕ್ನಿಕಲ್ ಸಾಕ್ಷ್ಯ ಸಂಗ್ರಹಿಸಿದ್ದು ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸ್ಥಳೀಯರಿಂದ ಪೊಲೀಸರಿಗೆ ಸಹಾಯ: ಪ್ರಕರಣ ನಡೆದಾಗ ಸ್ಥಳಕ್ಕೆ ಬಂದ ಪೊಲೀಸರಿಗೆ ಹಳ್ಳಿ ಮನೆ ಪ್ರವೀಣ್ ಫರ್ನಾಂಡೀಸ್ ನೇತೃತ್ವದ ತಂಡ ಸಂಪುರ್ಣವಾಗಿ ತನಿಖೆ ಮುಗಿಯುವವರೆಗೂ ಸಹಾಯ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಫಿಂಗರ್ ಫ್ರಿಂಟ್ ವಿಭಾಗದ ಡಿವೈಎಸ್ಪಿ ಗೌರೀಶ್, ಸಚಿನ್.ಬಿ.ಬಿ , ಉದಯ ಕುಮಾರ್ ಚಾಲಕ ಪರಶುರಾಮ.ಮಂಗಳೂರು FSL ವಿಭಾಗದ (SOCOಟೀಂ)ಅಧಿಕಾರಿಗಳಾದ ಕಾವ್ಯಶ್ರೀ ಮತ್ತು ಅರ್ಪಿತಾ, ಮಂಗಳೂರು ಶ್ವಾನದಳ ವಿಭಾಗದ ದಿನೇಶ್ ಕುಮಾರ್, ಚಾಲಕ ಸುಂದರ್ ಶೆಟ್ಟಿ ಮತ್ತು ಶ್ವಾನ ಬ್ರಾವೋ ಹಾಗೂ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಧನ್ ರಾಜ್ , ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್, ಎಎಸ್ಐ ದೇವಪ್ಪ ಮತ್ತು ಸಿಬ್ಬಂದಿ ಸುಂದರ್ ಶೆಟ್ಟಿ, ಮುತ್ತು ,ವಿಜಯ ರೈ, ಪ್ರಮೋದ್, ವಾಹನ ಚಾಲಕ ಚಿದಾನಂದ ಮತ್ತು ಕುಮಾರ್ ಭಾಗಿಯಾಗಿದ್ದರು.