ಬೆಂಗಳೂರು: ಉಜಿರೆಯ ರಥಬೀದಿಯಲ್ಲಿ ಆಟವಾಡುತ್ತಿದ್ದ ಖ್ಯಾತ ಉದ್ಯಮಿಯ 8 ವರ್ಷದ ಮಗ ಅನುಭವ್ ನನ್ನು ಕಿಡ್ನಾಪ್ ಮಾಡಿದ 7 ಮಂದಿಯನ್ನು ಕೋಲಾರ ಜಿಲ್ಲೆ ಮಾಸ್ತಿಯಲ್ಲಿ ಬಂಧಿಸಲಾಗಿದೆ.
ಡಿ.17ರ ಸಂಜೆ 6.30 ಹೊತ್ತಿಗೆ ಉಜಿರೆ ರಥಬೀದಿ ನಿವಾಸಿಯಾಗಿರುವ ಉದ್ಯಮಿ, ನಿವೃತ್ತ ನೇವಿ ಅಧಿಕಾರಿ ಎ.ಕೆ. ಶಿವನ್ ಅವರ 8 ವರ್ಷದ ಮೊಮ್ಮಗ ಅನುಭವ್ ನ ಅಪಹರಣ ಮಾಡಿದ್ದ ಆರೋಪಿಗಳು 17 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪೊಲೀಸರ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಕೋಲಾರ ಜಿಲ್ಲೆ ಮಾಸ್ತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕ ಸೇಫ್ ಆಗಿದ್ದು, ಮಾಸ್ತಿ ಠಾಣೆಯಲ್ಲಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಉಜಿರೆಗೆ ಕರೆತರಲಾಗುವುದು ಎಂದು ಹೇಳಲಾಗಿದೆ.
ಪ್ರಕರಣದ ವಿವರ:
ಮೊಮ್ಮಗ ಅನುಭವ್ ಜತೆ ಶಿವನ್ ಪ್ರತಿನಿತ್ಯ ರಥಬೀದಿ ಮುಂಭಾಗ ವಾಕಿಂಗ್ ತೆರಳುತ್ತಿದ್ದರು. 3ನೇ ತರಗತಿ ಓದುತ್ತಿರುವ ಅನುಭವ್ ಕೂಡ ತರಗತಿ ಇಲ್ಲದಿರುವುದರಿಂದ ಪ್ರತಿನಿತ್ಯ ಮೈದಾನದಲ್ಲಿ ಸಂಜೆ ಆಟವಾಡುತ್ತ ಮನೆ ಸೇರುತ್ತಿದ್ದ. ಆದರೆ ಡಿ.17ರ ಗುರುವಾರ ಸಂಜೆ 6.30ರ ವೇಳೆಗೆ ಅಜ್ಜ ಮತ್ತು ಮೊಮ್ಮಗ ರಥಬೀದಿಯಿಂದ ವಾಕಿಂಗ್ ಮುಗಿಸಿ ಮನೆ ಗೇಟು ಮುಂಭಾಗ ತಲುಪಿದ್ದಾರೆ. ಅಜ್ಜನ ಮುಂದೆ ಮೊಮ್ಮಗ ನಡೆದು ಹೋಗುತ್ತಿದ್ದ. ಗೇಟಿನ ಸಮೀಪ ಬಿಳಿ ಕಾರು ಹಾಗೂ ಇಬ್ಬರು ಹೊರ ನಿಂತಿದ್ದರು. ಅನುಭವ್ ಕಾರಿನ ಸಮೀಪ ಬರುತ್ತಿದ್ದಂತೆ ಓರ್ವ ಮಗುವನ್ನು ಎತ್ತಿಕೊಂಡು ಕಾರಿನೊಳಕ್ಕೆ ಹಾಕಿ ಪರಾರಿಯಾಗಿದ್ದಾರೆ.
ಕಾರಿನೊಳಕ್ಕೆ ಮೂವರು ಅಥವಾ ನಾಲ್ವರು ಇದ್ದು, ಹಳದಿ ನಂಬರ್ ಪ್ಲೇಟ್ ಇರುವಿಕೆಯನ್ನು ಶಿವನ್ ಅವರು ಗಮನಿಸಿದ್ದಾರೆ. ತಕ್ಷಣ ಅನುಭವ್ ತಾಯಿ ಸರಿತಾ ಸ್ಥಳಕ್ಕೆ ಓಡಿಬಂದರೂ, ಅಷ್ಟರಲ್ಲಾಗಲೇ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಸ್ವಲ್ಪ ಸಮಯದ ಬಳಿಕ ಅಪಹರಣಕಾರರು ಮಗುವಿನ ತಾಯಿಗೆ ಕರೆಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.