ಬೆಳ್ತಂಗಡಿ : ಬಸ್ ನಲ್ಲಿ ಯುವತಿಯ ಪಕ್ಕ ಕುಳಿತು ಪ್ರಯಾಣ ಮಾಡುವಾಗ ಯುವತಿಯ ಜೊತೆ ಮುಸ್ಲಿಂ ಯುವಕ ಮಾತಾನಾಡಿದ್ದಕ್ಕಾಗಿ ಉಜಿರೆಯಲ್ಲಿ ನಾಲ್ಕು ಜನರು ಸೇರಿ ಹಲ್ಲೆ ಮಾಡಿದ ಪ್ರಕರಣ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅದರಂತೆ ನಾಲ್ಕು ಜನರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ನಿವಾಸಿ ವೃತ್ತಿಯಲ್ಲಿ ಮಂಗಳೂರು ಮಲಬರ್ ಕಿಚನ್ ಎಂಬಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಜಾಹೀರ್(22) ಎಂಬಾತ ಎ.4 ರಂದು ಸಂಜೆ 3:30 ಕ್ಕೆ ಮಂಗಳೂರಿನಿಂದ ಚಿಕ್ಕಮಗಳೂರು ಹೋಗುವ ಸರಕಾರಿ ಬಸ್ ನಲ್ಲಿ ಎರಡು ಜನ ಕುಳಿತುಕೊಳ್ಳುವ ಸೀಟಿನಲ್ಲಿ ಓರ್ವ ಯುವತಿ ಕುಳಿತಿದ್ದಳು. ಇದರ ಪಕ್ಕದಲ್ಲಿ ಜಾಹೀರ್ ಕುಳಿತಿದ್ದ. ಬೆಳ್ತಂಗಡಿ ತಲುಪಿದಾಗ ಯುವತಿ ಇಳಿದಿದ್ದು ಇದನ್ನು ಪರಿಚಯದ ಯುವಕ ನಿತೇಶ್ ನೋಡಿದ್ದಾನೆ. 7:30 ರ ಸಮಯಕ್ಕೆ ಉಜಿರೆ ಇಂಡಿಯಾನ್ ಆಯಿಲ್ ಪೆಟ್ರೋಲ್ ಪಂಪ್ ತಲುಪಿದಾಗ ಬಸ್ ನಿಲ್ಲಿಸಿದ್ದು. ಪರಿಚಯದ ದಿನೇಶ್ ಕಕ್ಕಿಂಜೆ, ಸಚಿನ್ ಮಾಡು, ಅವಿನಾಶ್ ಮತ್ತು ಇತರರು ಬಸ್ ಗೆ ಹತ್ತಿ ನಿನ್ನ ವಿಡಿಯೋ ಇದೆ ಎಂದು ಜಾಹೀರ್ ನನ್ನು ಬಸ್ ನಿಂದ ಇಳಿಸಿ ಕೈಯಿಂದ ದೇಹದ ವಿವಿಧ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಈ ಸಮಯಕ್ಕೆ ಪರಿಚಯದ ಸಮೀರ್ ಬಂದಿದ್ದು ಆತನಿಗೂ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅದಲ್ಲದೆ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಹಲ್ಲೆಗೊಳಗಾದ ಜಾಹೀರ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ 323,341,506,34 ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಬಗ್ಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ , ಸಬ್ ಇನ್ಸ್ಪೆಕ್ಟರ್ ಅರ್ಜುನ್ ತಂಡದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಮಾಡಿ ಹಲ್ಲೆ ಮಾಡಿ ನಾಲ್ಕು ಜನ ಆರೋಪಿಗಳಾದ ದಿನೇಶ್ ಕಕ್ಕಿಂಜೆ, ಸಚಿನ್ ಮಾಡ, ಅವಿನಾಶ್ , ನಿತೇಶ್ ಚಿಬಿದ್ರೆ ಎಂಬಾತನನ್ನು ಬಂಧಿಸಿದ್ದರು. ಬಂಧಿತ ನಾಲ್ಕು ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು ಬಿಡುಗಡೆ ಮಾಡಲಾಗಿದೆ.