ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಕೊಲೆಗೆ ಬಳಸಿದ ಚೂರಿ ವಶಪಡಿಸಿಕೊಂಡಿದ್ದಾರೆ.
ಶನಿವಾರ ಪೊಲೀಸರು ಆರೋಪಿಯನ್ನು ವಿವಿಧ ಸ್ಥಳಗಳಲ್ಲಿ ಪೊಲೀಸರು ಮಹಜರಿಗೆ ಒಳಪಡಿಸಿದರು.ಕೃತ್ಯಕ್ಕೆ ಬಳಸಲಾದ ಚೂರಿಯನ್ನು ಮಂಗಳೂರಿನ ಬಿಜೈನಲ್ಲಿರುವ ಆತನ ಫ್ಲ್ಯಾಟ್ನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮನೆಯೊಳಗೆಯೇ ಅದನ್ನು ಬಚ್ಚಿಟ್ಟುಕೊಂಡಿದ್ದ ಆತ ಪೊಲೀಸರಿಗೆ ವಿವಿಧ ಕಥೆ ಹೇಳಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದ. 2 ದಿನಗಳಿಂದ ಪೊಲೀಸರು ಮೂಲ್ಕಿ, ಕೂಳೂರು ಸೇತುವೆ ಬದಿ ಸಹಿತ ಶುಕ್ರವಾರ ಪದವಿನಂಗಡಿ, ಕೊಂಚಾಡಿಯ ರವಿಶಂಕರ ವಿದ್ಯಾಮಂದಿರದ ಬಳಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರೂ ಚೂರಿ ಪತ್ತೆಯಾಗಿರಲಿಲ್ಲ.
ಶನಿವಾರ ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಬಿಜೈನಲ್ಲಿರುವ ಆತನ ಫ್ಲ್ಯಾಟ್ಗೆ ಕರೆದುಕೊಂಡು ಹೋದ ವೇಳೆ ಚೂರಿ ಇರಿಸಿದ ಜಾಗವನ್ನು ತಿಳಿಸಿದ್ದಾನೆ ಎನ್ನಲಾಗಿದೆ.ಕೃತ್ಯಕ್ಕೆ ಬಳಸಿದ ಮಾಸ್ಕ್, ರಕ್ತಸಿಕ್ತ ಬಟ್ಟೆ, ಬಳಸಿದ ಕಾರು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.