ಉಡುಪಿ: ಬಡಗಬೆಟ್ಟು ಗ್ರಾಮದ ವೃದ್ಧೆ ಗಿರಿಜಾ ಶೆಟ್ಟಿಗಾರ್ ನಿವೇಶನಕ್ಕಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮುಸ್ಲಿಂ ಮಹಿಳೆಯರು ಆಗ್ರಹಿಸಿದ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿಂದೂ ಮಹಿಳೆಗಾಗಿ ಮುಸ್ಲಿಂ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ, ಇದು ನಮ್ಮ ಹೆಮ್ಮೆಯ ಭಾರತ. ಬಿಜೆಪಿಯವರು ನೋಜಿ ಕಲಿಯಿರಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಆದರೆ ಇದೀಗ ಈ ಘಟನೆಯ ಹಿಂದಿನ ಅಸಲಿಯತ್ತನ್ನು ಬಿಜೆಪಿ ಬಯಲು ಮಾಡಿದೆ.
ಹೌದು.. ಸಚಿವರ ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ಮಹಿಳಾ ಮೋರ್ಚಾ, ಈ ಘಟನೆಯ ಹಿಂದಿನ ಅಸಲೀಯತನ್ನು ಬಹಿರಂಗ ಮಾಡಿದೆ. ಗಿರಿಜಾ ಶೆಟ್ಟಿಗಾರ್ ಅವರ ಪರವಾಗಿ ಕಣ್ಣೀರು ಹಾಕಿ ಮನವಿ ಮಾಡಿದ ಮುಸ್ಲಿಂ ಮಹಿಳೆ ಬೇರೆ ಯಾರೂ ಅಲ್ಲ, ಆ ವೃದ್ಧೆಯ ಸ್ವಂತ ಮಗಳೇ ಆಗಿದ್ದಾರೆ ಅನ್ನೋ ಸತ್ಯವನ್ನು ರಿವೀಲ್ ಮಾಡಿದೆ. ಸುಮಾರು 25 ವರ್ಷಗಳ ಹಿಂದೆಯೇ ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಸ್ವಂತ ಪುತ್ರಿಯೇ ತನ್ನ ತಾಯಿಯನ್ನು ಕರೆತಂದು ಸಹಾಯ ಕೇಳಿದ್ದನ್ನು ಕಾಂಗ್ರೆಸ್ ಮತ್ತು ಸಚಿವರು “ಕೋಮು ಸೌಹಾರ್ದತೆ” ಎಂದು ಬಿಂಬಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
“ಸ್ವಂತ ಮಗಳಾಗಿದ್ದರೂ ಆಕೆಯನ್ನು ಕೇವಲ ನೆರೆಮನೆಯ ಮುಸ್ಲಿಂ ಮಹಿಳೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿರುವುದು ಎಷ್ಟು ಸರಿ? ಜಿಲ್ಲೆಗೆ ಅತಿಥಿಯಾಗಿ ಬರುವ ತಮಗೆ ಕೇವಲ ಬಿಟ್ಟಿ ಪ್ರಚಾರದ ತೆವಲು ಅಷ್ಟೇ” ಎಂದು ಬಿಜೆಪಿ ಮಹಿಳಾ ಮೋರ್ಚಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದೆ. “ನಿಮ್ಮಿಂದ ನಾವು ಸೌಹಾರ್ದತೆಯ ಪಾಠ ಕಲಿಯಬೇಕಾಗಿಲ್ಲ. ಕೌಟುಂಬಿಕ ಸಂಬಂಧವನ್ನು ಕೋಮು ಸಾಮರಸ್ಯದ ಬಣ್ಣ ಬಳಿದು ರಾಜಕೀಯಗೊಳಿಸುವುದನ್ನು ನಿಲ್ಲಿಸಿ” ಎಂದು ಬಿಜೆಪಿ ನಾಯಕಿಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ,”ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯಿಂದ ಬಂದು ಉಡುಪಿಯ ಜನತೆಗೆ ಉಪದೇಶ ಮಾಡುವ ಅಗತ್ಯವಿಲ್ಲ. ಉಡುಪಿಯ ಜನರು ಪ್ರಜ್ಞಾವಂತರು. ಜಿಲ್ಲೆಯ ಐವರೂ ಬಿಜೆಪಿ ಶಾಸಕರು , ಸಂಸದರು ಜಾತಿ, ಮತಗಳ ಭೇದವಿಲ್ಲದೆ ಜನರ ಅಹವಾಲು ಆಲಿಸುತ್ತೇವೆ” ಎಂದು ಕಿಡಿ ಕಾರಿದ್ದಾರೆ.
”ಬುರ್ಖಾ ಧರಿಸಿ ಬಂದ ಮಹಿಳೆಯರು ಸಚಿವೆಯನ್ನೇ ಯಾಮಾರಿಸಿದ್ದಾರೆ. ಹಿಜಾಬ್, ಬುರ್ಖಾಧಾರಿಗಳು ಉಡುಪಿ ಜಿಲ್ಲೆಗೆ ಮಾರಕ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ” ಎಂದು ಶಾಸಕ ಯಶ್ ಪಾಲ್ ಸುವರ್ಣ ಕಿಡಿ ಕಾರಿದ್ದಾರೆ.


