ಕಾಸರಗೋಡು: ಗಲ್ಪ್ ನಲ್ಲಿದ್ದ ಸೀತಾಂಗೋಳಿಯ ಪುತ್ತಿಗೆಯ ಮುಗು ನಿವಾಸಿ ಅಬೂಬಕ್ಕರ್ ಸಿದ್ಧಿಕ್ (31) ಎಂಬವರನ್ನು ಊರಿಗೆ ಕರೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಡಾಲರ್ ಸಾಗಾಟಕ್ಕೆ ಸಂಬಂಧಿಸಿ ಕೊಲೆ ನಡೆದಿದೆ ಎನ್ನಲಾಗಿದೆ. ಅಬೂಬಕ್ಕರ್ ಸಿದ್ಧಿಕ್ ವಿದೇಶಕ್ಕೆ ತೆರಳುವಾಗ ಉಪ್ಪಳದ ತಂಡವೊಂದು 50 ಲಕ್ಷ ರೂ. ಮೌಲ್ಯದ ಡಾಲರ್ ನೀಡಿದ್ದು, ಬಳಿಕ ಅದು ನಾಪತ್ತೆಯಾಗಿತ್ತು. ಗುಪ್ತವಾಗಿ ಡಾಲರ್ ಬಚ್ಚಿಟ್ಟ ಬ್ಯಾಗ್ ದುಬೈಯಲ್ಲಿರುವ ಓರ್ವರಿಗೆ ಹಸ್ತಾಂತರಿಸಿರುವುದಾಗಿ ಅಬೂಬಕ್ಕರ್ ಸಿದ್ಧಿಕ್ ತಿಳಿಸಿದ್ದರೂ, ಅದು ಸಂಬಂಧಪಟ್ಟವರಿಗೆ ದೊರಕಿರಲಿಲ್ಲ. ಇದರಿಂದಾಗಿ ಗ್ಯಾಂಗ್ ಮನೆಯಲ್ಲೂ ತಪಾಸಣೆ ನಡೆಸಿತ್ತು.ಸಿದ್ಧಿಕ್ ಸಹೋದರ ಅನ್ವರ್ ಮತ್ತು ಮಿತ್ರ ಅನ್ಸಾರಿ ಅವರನ್ನು ಅಪಹರಿಸಿತ್ತು.
ಸಿದ್ಧಿಕ್ ಅವರನ್ನು ಭಾನುವಾರ ಗಲ್ಪ್ ನಿಂದ ಮನೆಗೆ ಕರೆಸಿ ಪೈವಳಿಕೆಯ ನಿರ್ಜನ ಸ್ಥಳದ ಮನೆಗೆ ಕರೆದೊಯ್ದು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿದ್ದರು. ಮೃತದೇಹವನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಂಡ ಪರಾರಿಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ಬಂಧನವಾಗಿದೆ. ಪೊಲೀಸರ ತಂಡ ಇದೀಗ ಹೆಚ್ಚಿನ ಆರೋಪಿಗಳ ಪತ್ತೆಗೆ ಗೋವಾಕ್ಕೆ ತೆರಳಿದೆ.ಮಂಜೇಶ್ವರದ ಅಜೀಜ್ ಮತ್ತು ರಹೀಂನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.