ಮೂಡಬಿದಿರೆಯಲ್ಲಿ ನಡೆದ ಪಿಯುಸಿ ವಿಧ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಇದಕ್ಕೆ ಸಂಬಂಧಿಸಿದಂತೆ ವೃದ್ಧನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಧರ ಪುರಾಣಿಕ್ ಬಂಧಿತ ಆರೋಪಿ.
ಮೂಡಬಿದರೆಯ ಪ.ಪೂ. ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಆಕೆ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಲಭ್ಯವಾಗಿದ್ದು ಅದರಲ್ಲಿ ಕಾಲೇಜಿನ ನಿವೃತ್ತ ಸಿಬ್ಬಂದಿ ಶ್ರೀಧರ್ ಪುರಾಣಿಕ ಹೆಸರನ್ನು ಉಲ್ಲೇಖಿಸಿದ್ದಾಳೆ.ಆತನ ಲೈಂಗಿಕ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾಳೆ.
ಈ ಹಿನ್ನೆಲೆಯಲ್ಲಿ ಆರೋಪಿ ಶ್ರೀಧರ ಪುರಾಣಿಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿದ್ಯಾರ್ಥಿನಿ ಮಂಗಳವಾರ ಕಾಲೇಜಿಗೆ ಹಾಜರಾಗಿದ್ದು, ವಿಪರೀತ ಕಿವಿನೋವು ಇರುವುದಾಗಿ ಆಕೆ ಕಾಲೇಜಿನಲ್ಲಿ ತಿಳಿಸಿದ್ದಳು. ಹಾಗಾಗಿ ಕಾಲೇಜಿನಿಂದ ಆಕೆಯ ಪೋಷಕರೊಬ್ಬರಿಗೆ ಕರೆಮಾಡಿ ಆಕೆಯನ್ನು ಕರೆದುಕೊಂಡು ಹೋಗಲು ಸೂಚಿಸಿದ್ದರೆನ್ನಲಾಗಿದೆ.
ಕರೆ ಸ್ವೀಕರಿಸಿದ ಆಕೆಯ ಪೋಷಕರೊಬ್ಬರು ಕೆಲಸದ ಒತ್ತಡದಲ್ಲಿರುವುದರಿಂದ ಆರೋಪಿ ಪುರಾಣಿಕನಿಗೆ ಆಕೆಯನ್ನು ಕಾಲೇಜಿನಿಂದ ಕರೆತರುವಂತೆ ಸೂಚಿಸಿದ್ದಾರೆ. ಸಂತ್ರಸ್ಥೆಯ ಪೋಷಕರು ಆರೋಪಿ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಕಾರಣ ಪರಿಚಯಸ್ಥ ಪುರಾಣಿಕ ಆಕೆಯನ್ನು ತನ್ನ ಕಾರಿನಲ್ಲಿ ಮನೆಯತ್ತ ಕರೆದುಕೊಂಡು ಬರುವಾಗ ಕಾರು ನಿಲ್ಲಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಇದರಿಂದ ಮನನೊಂದ ಆಕೆಯು ಬುಧವಾರ ತನ್ನ ಮನೆಯ ಸಮೀಪದ ಹಾಡಿಯ ಮರವೊಂದಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಳೆನ್ನಲಾಗಿದೆ.
ಈ ಬಗ್ಗೆ ಪೋಕ್ಸೋ ಕಾಯಿದೆ, ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ದಂಡ ಸಂಹಿತೆಯ ಆಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಹಾಯಕ ಕಮಿಷನರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.