ಬಂಟ್ವಾಳ; ವೇದಮೂರ್ತಿ ಸೀತಾರಾಮ ನೂರಿತ್ತಾಯರ ಸರಳ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಕೂಡಿದ್ದ ಜೀವನ ಅನುಕರಣೀಯ. ದೈವ ದೇವರಲ್ಲಿ ಅಪಾರವಾದ ಭಕ್ತಿ ಮತ್ತು ತಾನು ಮಾಡುತ್ತಿದ್ದ ಪೌರೋಹಿತ್ಯದಲ್ಲಿ ಅವರು ಹೊಂದಿದ್ದ ಶ್ರದ್ಧೆ ನಮಗೆಲ್ಲರಿಗೆಲ್ಲರಿಗೂ ಮಾರ್ಗದರ್ಶಿಯಾಗಿದೆ. ಗ್ರಾಮಸ್ಥರಿಗೆ ಕಷ್ಟ ಬಂದಾಗ ಅವರಿಗಾಗಿ ಶ್ರೀಯುತರು ಉಳ್ಳಾಲ್ತಿ ಅಮ್ಮನವರಲ್ಲಿ ಪ್ರಾರ್ಥಿಸುತ್ತಿದ್ದರು ಎಂದು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕರಾದ ಪಳನೀರು ಅನಂತ ಭಟ್ಟರವರು ಹೇಳಿದರು.
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಸುದೀರ್ಘವಾದ ಅವಧಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ವೇದಮೂರ್ತಿ ಸೀತಾರಾಮ ನೂರಿತ್ತಾಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಅಧ್ಯಕ್ಷತೆ ವಹಿಸಿದ್ದರು.
ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಜಗನ್ನಾಥ ಚೌಟ ಬದಿಗುಡ್ಡೆ, ಮೋಹನ ಪೈ ಮಾಣಿ ನುಡಿನಮನ ಸಲ್ಲಿಸಿದರು. ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟುಗುತ್ತು, ನಾರಾಯಣ ಆಳ್ವ ಕೊಡಾಜೆ, ರಾಮಚಂದ್ರ ಪೂಜಾರಿ ಪಾದೆ, ಲೋಕೇಶ್ ಪೂಜಾರಿ ಪಲ್ಲತ್ತಿಲ ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು