ಕಡಬ; ಮನೆಯ ಅಂಗಳದಲ್ಲಿದ್ದ ಅಶೋಕ ಮರ ಕಡಿಯಲು ಬಿಡದ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡಿರುವ ಘಟನೆ ಶಿರಾಡಿ ಸಮೀಪದ ಅಡ್ಡಹೊಳೆಯಲ್ಲಿ ನಡೆದಿದೆ. ಇಲ್ಲಿನ ಮನೆಯೊಂದರ ಅಂಗಳದ ಬದಿಯಲ್ಲಿ 40 ವರ್ಷದ ಹಳೆಯ ಅಶೋಕ ಮರವನ್ನು ತೆಗೆಯಬೇಕೆಂದು ತಗಾದೆ ತೆಗೆದು ವೃದ್ಧ ದಂಪತಿ ಮೇಲೆ ಹಲ್ಲೆ ಮಾಡಿ ದುಷ್ಕರ್ಮಿಗಳ ತಂಡ ಮರ ಕಡಿದುರುಳಿಸಿದೆ.
ವೃದ್ಧ ದಂಪತಿಯ ಮನೆಯ ಅಂಗಳದಲ್ಲಿದ್ದ ಮರ ತೆರವು ಮಾಡಬೇಕೆಂದು ಇಲ್ಲಿನ ಸ್ಥಳೀಯ ಕೆಲ ವ್ಯಕ್ತಿಗಳು ಕಳೆದ ಈ ಹಿಂದೆಯೇ ಗಲಾಟೆ ಎಬ್ಬಿಸಿದ್ದರು. ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮರ ತೆರವು ಮಾಡಬಾರದೆಂದು ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ನಿಂದ ಆದೇಶವಾದ ಹಿನ್ನೆಲೆಯಲ್ಲಿ ಯಥಾಸ್ಥಿತಿ ಮುಂದುವರೆದಿತ್ತು.
ಸೋಮವಾರ ಸಾಯಂಕಾಲದ ವೇಳೆ ಮದ್ಯದ ನಶೆಯಲ್ಲಿ ಏಕಾಏಕಿ ಬಂದ ಬಂದ ತಂಡವೊಂದು ಏಕಾಏಕಿ ವೃದ್ಧ ರಾಜು ದಂಪತಿ ಮೇಲೆ ಹಲ್ಲೆ ಮಾಡಿ ಮರವನ್ನು ಕಡಿದು ಹಾಕಿ ಕ್ರೌರ್ಯ ಮೆರೆದಿದ್ದಾರೆ. ಈ ಎಲ್ಲಾ ದೃಶ್ಯಗಳು ಮನೆಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ .
ಈ ಘಟನೆ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಮತ್ತು ಸ್ಥಳೀಯ ಅರಣ್ಯ ರಕ್ಷಕ ಸುನಿಲ್ ನಾಯಕ್ ಅವರ ಗಮನಕ್ಕೆ ತರಲಾಗಿದೆ. ಶಾಲಾ ಮಕ್ಕಳಿಗೆ ಸೇರಿದಂತೆ ಸ್ಥಳಿಯವಾಗಿ ನೆರಳು, ಗಾಳಿ ನೀಡುತ್ತಿದ್ದ ಹಳೆಯ ಮರವನ್ನು ಬಹಿರಂಗವಾಗಿ ಕಡಿದು ಹಾಕಿದರೂ ಈ ಘಟನೆಗೂ ತಮಗೂ ಏನೂ ಸಂಬಂಧವೇ ಇಲ್ಲ ಎಂಬಂತೆ ಅರಣ್ಯ ಇಲಾಖೆ ವರ್ತಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವೃದ್ಧ ದಂಪತಿ ದೂರು ನೀಡಿದ್ದಾರೆ ಎನ್ನಲಾಗಿದೆ.