ಬಳ್ಳಾರಿ : ಅದು ಖಾಸಗಿ ಕಂಪನಿಯ ನಿಷೇಧಿತ ವೆಸ್ಟೇಜ್ ಡಂಪಿಂಗ್ ಯಾರ್ಡ್. ಆದ್ರೇ ಅಲ್ಲಿ ಕೆಲ ಕಾರ್ಮಿಕ ವರ್ಗದ ಜನರು ಕದ್ದು ಮುಚ್ಚಿ ಹೋಗಿ ಅಲ್ಲಿ ಸಿಗೋ ವೆಸ್ಟೇಜ್ ಐರನ್ ಆಯ್ದು ಮಾರಾಟ ಮಾಡೋ ಕೆಲಸ ಮಾಡ್ತಾರೆ. ಈ ರೀತಿ ವೆಸ್ಟೇಜ್ ಆಯೋ ಕೆಲಸದ ವೇಳೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಆದ್ರೇ ಈ ಸಾವಿಗೆ ಹೊಣೆಯಾರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಜೆಎಸ್ಡಬ್ಲ್ಯು ಡಂಪಿಂಗ್ ಯಾರ್ಡ್ಗೆ ಆಯಲು ಕೂಲಿ ಕಾರ್ಮಿಕರು ಹೋಗೋದು ಸಾಮಾನ್ಯ. ಆಯ್ದು ತಂದ ಕಿಟ್ಟವನ್ನು ಕೆ.ಜಿಗೆ 15 ರೂಪಾಯಿಯಂತೆ ಮಾರಾಟ ಮಾಡಿ ಕೆಲವರು ಜೀವನ ನಡೆಸುತ್ತಾರೆ.. ಇದೇ ರೀತಿ ವೆಸ್ಟೇಜ್ ಆಯಲು ಹೋದಾಗ ಸಂಡೂರು ಸುಲ್ತಾನ ಪುರದಲ್ಲಿ ಮಣ್ಣಿನ ದಿಬ್ಬ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ವಿಷಯ ತಿಳಿದ ಪೊಲೀಸರು ಜೆಸಿಬಿ ಯಂತ್ರಗಳ ಸಹಾಯದಿಂದ ಸತತ ಎರಡು ದಿನಗಳ ಪ್ರಯತ್ನದಿಂದ ಶವವನ್ನು ಹೊರತೆಗೆಯಲಾಗಿದೆ..
ತುಮಟಿ ಗ್ರಾಮದ ತಿಮ್ಮಪ್ಪ ಎಂಬುವವರು ನೀಡಿರುವ ದೂರಿನ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಜೆಎಸ್ಡಬ್ಲ್ಯು ಕಂಪನಿ ಹಾಗೂ ಕುಡತಿನಿ ವಾಸಿಗಳಾದ ಸತ್ಯಪ್ಪ , ರಾಜಶೇಖರ್, ಅಂಜಿ, ಸ್ಟೋರ್ ಪಂಪಾಪತಿ, ಗ್ಯಾಂಗಿ ಹನುಮಂತಪ್ಪ ಮತ್ತು ಶಂಕರಗೌಡ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ಅಪಾಯಕಾರಿ ಸ್ಥಳವಾದ ಸುಲ್ತಾನಪುರದ ಡಂಪಿಂಗ್ ಯಾರ್ಡ್ ಒಳಹೋಗಲು ಕೂಲಿ ಕಾರ್ಮಿಕರಿಗೆ ಯಾವುದೇ ನಿರ್ಬಂಧ ಹೇರದ ಜೆಎಸ್ಡಬ್ಲ್ಯು ವೆಸ್ಟೇಜ್ ಆಯಲು ಅವಕಾಶ ಕೊಟ್ಟಿದೆ. ವೆಸ್ಟೇಜ್ ಗುಡ್ಡವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ನಮ್ಮವರನ್ನು ಕಳೆದುಕೊಂಡಿದ್ದೇವೆಂದು ಆರೋಪಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಹೇಳಲಾಗಿದೆ. ಆದ್ರೇ ಕಂಪನಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಇದೊಂದು ನಿಷೇಧಿತ ಪ್ರದೇಶ ಎನ್ನುವುದನ್ನು ಮಾತ್ರ ಪೊಲೀಸರಿಗೆ ತಿಳಿಸಿದ್ದಾರೆ