ಕುಂದಾಪುರ: 1 ಕೆಜಿ ತೂಕದ ಗಾಂಜಾವನ್ನು ಹೊಸ ವರ್ಷದ ಪಾರ್ಟಿಗೆಂದು ಸಾಗಿಸುತ್ತಿದ್ದ ಯುವಕನೊಬ್ಬನನ್ನು ಬಸೂರು ಮೂರುಕೈಯ ಬಸ್ಸು ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ವಿಶ್ವ ಪ್ರಸನ್ನ ಗೋಡೆ ( 20 ). ಬಂಧಿತನಿಂದ 20,000 ರೂ . ಮೌಲ್ಯದ 1 ಕೆ.ಜಿ 84 ಗ್ರಾಂ ತೂಕದ ಗಾಂಜಾ , 250 ರೂ . ನಗದು ಹಾಗೂ ಒಂದು ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂದಾಪುರ ಉಪ ವಿಭಾಗದ ಪೊಲೀಸ್ ಉಪನಿರೀಕ್ಷಕ ಶ್ರೀಕಾಂತ್ ಕೆ ಅವರು ರಾತ್ರಿ 8 ಗಂಟೆ ಸುಮಾರಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬಸೂರಿನ ಮೂರುಕೈಯ ಬಸ್ಸು ನಿಲ್ದಾಣದ ಎದುರು ಅನುಮಾನಾಸ್ಪದವಾಗಿ ನಿಂತಿದ್ದ ಯುವಕನನ್ನು ವಿಚಾರಿಸಿದ್ದಾರೆ.
ಆಗ ಆತ ಆಟೋಗಾಗಿ ಕಾಯುತ್ತಿರುವುದಾಗಿ ತಿಳಿಸಿದ, ಅನುಮಾನಗೊಂಡು ಪೊಲೀಸರು ಆತನ ಬಳಿ ಇದ್ದ ಬ್ಯಾಗ್ ನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ .
ಹೈದರಾಬಾದ್ ನಿಂದ ಕುಂದಾಪುರಕ್ಕೆ ಹೊಸ ವರುಷದ ಪಾರ್ಟಿ ಮಾಡಲೆಂದು ಗಾಂಜಾ ತಂದಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ ಗಾಂಜಾ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು , ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .


