ಸುಳ್ಯ; ಅಜ್ಜಾವರದ ತುದಿಯಡ್ಕಯಲ್ಲಿ ಪುಟ್ಟ ಮರಿಯಾನೆಯೊಂದು ಕಳೆದ ಮೂರು ದಿನಗಳಿಂದ ಅಮ್ಮನ ಸ್ಪರ್ಶಕ್ಕಾಗಿ ಹಂಬಲಿಸುತ್ತಾ ಕಣ್ಣೀರು ಹಾಕುತ್ತಿದೆ. ಈ ದೃಶ್ಯ ನೋಡುಗರ ಹೃದಯ ಹಿಂಡುತ್ತಿದೆ.
ಮೊನ್ನೆ ಎ.12 ರಂದು ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಮೇಲೆತ್ತಲಾಗಿರುವ ಮೂರು ಆನೆಗಳು ಕಾಡು ಸೇರಿದ್ದರೆ ಮರಿಯಾನೆಯೊಂದು ಇನ್ನೂ ತಾಯಿ ಮಡಿಲು ಸೇರಿಲ್ಲ. ಕೆರೆಯಿಂದ ಮೇಲೆ ಬರಲಾರದೆ ಒದ್ದಾಡುತ್ತಿದ್ದ ಮರಿಯಾನೆಯನ್ನು ಸ್ಥಳೀಯರು ಮೇಲೆತ್ತಿದ್ದರು. ಈ ವೇಳೆ ಮನುಷ್ಯರು ಸ್ಪರ್ಶಿಸಿದ್ದರಿಂದ ತಾಯಾನೆ ಮರಿಯಾನೆಯನ್ನು ತಮ್ಮ ಬಳಗ ಸೇರಿಸಿಕೊಳ್ಳುತ್ತಿಲ್ಲ.
ನಿನ್ನೆ ತಾಯಿಗಾಗಿ ಕಾಡಿಂಚಿನಲ್ಲಿ ಅಳುತ್ತಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆಯವರು ಹಿಡಿದು ಆನೆಗಳ ಹಿಂಡಿನ ಜತೆ ಸೇರಿಸಲು ಮುಂದಾದರು. ಆನೆಗಳ ಗುಂಪು ತುದಿಯಡ್ಕ ಭಾಗದಿಂದ ಬೆಳ್ಳಪ್ಪಾರೆ ಎಂಬಲ್ಲಿ ಇರುವ ಮಾಹಿತಿ ಪಡೆದ ಇಲಾಖೆಯವರು ಆನೆಮರಿಯನ್ನು ಪಿಕಪ್ ವಾಹನಕ್ಕೆ ಹತ್ತಿಸಿ ಬೆಳ್ಳಪ್ಪಾರೆ ಕಾಡಿಗೆ ಕೊಂಡೊಯ್ದರು. ಆದರೆ ಇಲಾಖೆಯವರಿಗೆ ಬೆಳ್ಳಪ್ಪಾರೆ ಯಲ್ಲಿ ಆನೆಗಳ ಹಿಂಡು ಪತ್ತೆಯಾಗಿಲ್ಲ. ಸಂಜೆಯವರೆಗೆ ಇಲಾಖೆಯವರು ಪ್ರಯತ್ನ ಪಟ್ಟರಾದರೂ ಫಲಪ್ರವಾಗಿಲ್ಲ.
ಮರಿಯಾನೆಯನ್ನು ಆನೆಗಳ ಗುಂಪಿಗೆ ಸೇರಿಸಲು ಪ್ರಯತ್ನ ಆಗುತ್ತಿದೆ. ಇಂದು ಮತ್ತೆ ಮರಿಯಾನೆಯನ್ನು ಸೇರಿಸುವ ಕೆಲಸ ಮುಂದುವರಿಸುತ್ತೇವೆ ಎಂದು ಸುಳ್ಯ ರೇಂಜರ್ ಮಂಜುನಾಥ ಅವರು ತಿಳಿಸಿದ್ದಾರೆ.