ಡಿ.10ರಂದು ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಇಂದು ಘೋಷಣೆಯಾಗುವ ಸಾಧ್ಯತೆಗಳಿವೆ. ಬಿಜೆಪಿ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅಭ್ಯರ್ಥಿಯಾಗಿ ಆಯ್ಕೆ ಆಗುವುದು ಬಹುತೇಕ ಖಚಿತ ಎಂಬುದು ತಿಳಿದಿದೆ.
ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ವಿಧಾನ ಪರಿಷತ್ ಚುನಾವಣೆಗೆ ನ. 16ರಂದು ಅಧಿಸೂಚನೆ ಹೊರಬೀಳಲಿದೆ, ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಹಾಗೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ನ.23, ನ. 24ರಂದು ನಾಮಪತ್ರ ಪರಿಶೀಲನೆ, ನ. 26 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. ಡಿ.10ರಂದು ಮತದಾನ ನಡೆಯಲಿದ್ದು, ಡಿ.14ರಂದು ಮತಗಳ ಎಣಿಕೆ ನಡೆಯಲಿದೆ.
ಕಾಂಗ್ರೆಸ್ನಿಂದ ಉಡುಪಿಯಲ್ಲಿ 3 ಹಾಗೂ ದ.ಕ. ಜಿಲ್ಲೆ 8 ಸೇರಿದಂತೆ ಒಟ್ಟು 11 ಮಂದಿ ಪಕ್ಷದ ಟಿಕೆಟ್ ಗೆ ಅರ್ಜಿ ಈಗಾಗಲೇ ಸಲ್ಲಿಸಿದ್ದಾರೆ. ದ.ಕ. ಜಿಲ್ಲೆಯಿಂದ ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಹೇಮನಾಥ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಐವನ್ ಡಿ’ಸೋಜಾ, ಪ್ರಸಾದ್ ರಾಜ್ ಕಾಂಚನ್, ಕೃಪಾ ಆಳ್ವ, ಎಐಸಿಸಿ ಕಾರ್ಯದರ್ಶಿಗಳಾದ ಪಿ.ವಿ. ಮೋಹನ್, ವಿವೇಕರಾಜ್ ಪೂಜಾರಿ ಸೇರಿದಂತೆ 8 ಮಂದಿ ಹಾಗೂ ಉಡುಪಿಯಿಂದ ಮಹಿಳಾ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷೆ, ನ್ಯಾಯವಾದಿ ಶ್ಯಾಮಲಾ ಭಂಡಾರಿ, ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪೂಜಾರಿ ಹಾಗೂ ಯೋಗೀಶ್ ಶೆಟ್ಟಿ ಅವರು ಅರ್ಜಿ ಹಾಕಿದ್ದಾರೆ. ಹಾಗೇ ಪಕ್ಷೇತರರಾಗಿ ಡಾ. ರಾಜೇಂದ್ರ ಕುಮಾರ್, ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದರಿಂದ ಚುನಾವಣೆಗೆ ಹೊಸ ತಿರುವು ನೀಡಿದೆ.
ಬಿಜೆಪಿಗೆ ಯಾವುದೇ ಕಗ್ಗಂಟು ಇಲ್ಲವಾದರೂ ಕಾಂಗ್ರೆಸ್ ಗೆ ಕಗ್ಗಂಟು ಇರುವುದು ಖಂಡಿತ. ಮುಂದಿನ ಬೆಳವಣಿಗೆ ಏನು ಎಂದು ಕಾದುನೋಡಬೇಕಾಗಿದೆ.