ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಭಾರತೀಯ ಸೇನೆ ಇವತ್ತು 3 ಉಗ್ರರನ್ನು ಹತ್ಯೆಗೈದಿದೆ. ದುರದೃಷ್ಟವಶಾತ್ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆಯ ಓರ್ವ ಎಎಸ್ಐ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀನಗರದ ಹೊರವಲಯದಲ್ಲಿ ನಾಕಾಬಂದಿ ನಡೆಸಿದ್ದ ಪೊಲೀಸರು ಮತ್ತು ಸಿಆರ್ ಪಿಎಫ್ ಮೇಲೆ ಉಗ್ರರು ದಾಳಿ ಆರಂಭಿಸಿದರು. ಕೂಡಲೇ ಪ್ರದೇಶವನ್ನು ಸುತ್ತುವರಿದ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಮತ್ತೆ ಉಗ್ರರು ದಾಳಿ ಆರಂಭಿಸಿದರು. ಅದಕ್ಕೆ ದಿಟ್ಟ ಉತ್ತರ ನೀಡಿದ ಪೊಲೀಸರು ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಸದೆಬಡಿದಿದ್ದಾರೆ.
ಮೊನ್ನೆ ಶುಕ್ರವಾರ ರಾತ್ರಿಯಿಂದ ನಿನ್ನೆಯವರೆಗೆ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಎರಡನೇ ಎನ್ ಕೌಂಟರ್ ಇದಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಿನ್ನೆ ನಡೆದ ಎನ್ ಕೌಂಟರ್ ನಲ್ಲಿ ಹಿಜ್ ಬುಲ್ ಮುಜಾಹಿದ್ದೀನ್ ಸಂಘಟನೆಯ ಮೂವರು ಉಗ್ರರು ಹತ್ಯೆಯಾಗಿದ್ದು ಓರ್ವ ಯೋಧರು ಹುತಾತ್ಮರಾಗಿದ್ದಾರೆ.