ಕಡಬ;ತಮ್ಮದೇ ಪಕ್ಷದ ಗ್ರಾ.ಪಂ. ಅಧ್ಯಕ್ಷನ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಗೆ ಮೂವರು ಸದಸ್ಯರು ರಾಜೀನಾಮೆ ನೀಡಿದ್ದಾರೆ. ಐತ್ತೂರು ಗ್ರಾ.ಪಂ. ಅಧ್ಯಕ್ಷರು ತಮ್ಮದೇ ಬೆಂಬಲಿತ ಪಕ್ಷದ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರಾದ ಈರೇಶ್, ಮನಮೋಹನ ಗೋಳ್ಯಾಡಿ ಹಾಗೂ ಪ್ರೇಮರವರು ರಾಜೀನಾಮೆ ಸಲ್ಲಿಸಿದ್ದಾರೆ.
ಐತ್ತೂರು ಗ್ರಾ.ಪಂ. ಅಧ್ಯಕ್ಷರಾದ ಶ್ಯಾಮಲರವರು ನಮ್ಮ ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿದ್ದರೂ ಪಂಚಾಯತ್ನಲ್ಲಿ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ನಾಲ್ಕೈದು ತಿಂಗಳ ಹಿಂದೆಯೇ ನಿಮ್ಮ ಗಮನಕ್ಕೆ ತಂದಿದ್ದು, ತಾವು ಸುಂಕದಕಟ್ಟೆಯಲ್ಲಿ ಐದು ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸೇರಿಸಿ ಮಾತುಕತೆ ನಡೆಸಿ, ಎಲ್ಲ ಪಂಚಾಯತ್ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಬೇಕೆಂದು ಸೂಚನೆ ನೀಡಿದ್ದರೂ ನಿಮ್ಮ ಮಾತನ್ನು ಪಂಚಾಯತ್ ಅಧ್ಯಕ್ಷರು ನಡೆಸಿಕೊಟ್ಟಿಲ್ಲ, ಬಳಿಕದ ನಡೆದ ಒಂದು ಘಟನೆಯಲ್ಲೂ ಅಧ್ಯಕ್ಷರು ಏಕಪಕ್ಷೀಯವಾಗಿ ವರ್ತಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಗ್ರಾ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.